ಇಳಕಲ್: ಸಂಗ್ರಹಿಸಿದ ನೀರನ್ನು ಮುಚ್ಚಿಡುವುದು ಹಾಗೂ ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆಯ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೇ ಡೆಂಗಿ ಮುಂತಾದ ಸಾಂಕ್ರಾಮಿಕ ರೋಗ ಬರದಂತೆ ತಡೆಯಬಹುದು ಎಂದು ಭಾವಸಾರ ವಿಜನ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಹಂಚಾಟೆ ಹೇಳಿದರು.
ಕೆಲವು ದಿನಗಳ ಹಿಂದೆ ಜ್ವರ ಪೀಡಿತವಾಗಿದ್ದ ಸಮೀಪದ ಚಿಕ್ಕಕೊಡಗಲಿ ತಾಂಡಾದಲ್ಲಿ ಸರ್ವ ವಿಜಯ ಸೇವಾ ಸಂಸ್ಥೆ ಮತ್ತು ಭಾವಸಾರ ವಿಜನ್ ಇಂಡಿಯಾ ಇಳಕಲ್ ಘಟಕ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಹಾಗೂ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ವ ವಿಜಯ ಸಂಸ್ಥೆಯ ಆಸೀಫ್ ಕಟಾಂಬ್ಲಿ ಮಾತನಾಡಿದರು.
ಗ್ರಾಮದ ಹಿರಿಯರಾದ ಶಂಕ್ರಪ್ಪ ನಾಯಕ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರಾದ ಚತ್ರಪ್ಪ ರಾಠೋಡ ಅವರು ಸ್ವಚ್ಛತಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ತಾಂಡಾದಲ್ಲಿ ಈಚೆಗೆ ನೂರಾರು ಜನರು ಜ್ವರ ಸೇರಿದಂತೆ ಅನೇಕ ರೋಗಗಳಿಗೆ ತುತ್ತಾಗಿದ್ದರು.
ಪತ್ರಿಕೆಗಳು ಗಮನ ಸೆಳೆದ ನಂತರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿತು. ಈಗ ಇಳಕಲ್ನಿಂದ ನಮ್ಮ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸ್ವಚ್ಛತಾ ಕಾರ್ಯ ಮಾಡಲು ಆಗಮಿಸಿದ ಎಲ್ಲರಿಗೂ ತಾಂಡಾದ ಪರವಾಗಿ ಕೃತಜ್ಞತೆಗಳು. ಮುಂದೆ ತಾಂಡಾವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ತಾಂಡಾದ ಕಮಲಪ್ಪ ರಾಠೋಡ, ಶೇಖಪ್ಪ ಜಾಧವ, ರಮೇಶ ರಾಠೋಡ, ಪರಶುರಾಮ ಚವಾಣ, ರವಿ ಚವಾಣ, ಸರ್ವ ವಿಜಯ ವಿಜಯ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಭಾವಸಾರ ವಿಜನ್ ಇಂಡಿಯಾ ಘಟಕದ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.