ಬಾಗಲಕೋಟೆ: ಹಣ್ಣು, ತರಕಾರಿಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವದರಿಂದ ರೈತರಿಗಿಂತ ಮದ್ಯವರ್ತಿಗಳಿಗೆ ಹೆಚ್ಚು ಲಾಭ. ಆದ್ದರಿಂದ ರೈತರು ಹಣ್ಣು, ತರಕಾರಿ ವಿಂಗಡಿಸಿ, ಸಂಸ್ಕರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಆರ್ಥಿಕ ಲಾಭ ಪಡೆಯಬೇಕು ಎಂದು ತೋಟಗಾರಿಕಾ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ವೈ.ಕೆ.ಕೋಟಿಕಲ್ ಹೇಳಿದರು.
ನಗರದ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ನಡೆದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳ ರಾಜ್ಯ ಮಟ್ಟದ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧ ಹಣ್ಣುಗಳನ್ನು ಬೆಳೆಸುವ ಮಾರ್ಗದರ್ಶನ ಹಾಗೂ ಅವುಗಳನ್ನು ಸಂಸ್ಕರಿಸಲು ತೋಟಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಹತ್ತು ಹಲವು ಕಾರ್ಯಕ್ರಮಗಳ ಮಾಹಿತಿ ನೀಡಲಾಗುತ್ತಿದೆ. ರೈತರು ಈ ಸೌಲಭ್ಯ ಪಡೆದು ಸ್ವಾವಲಂಬನೆಗಳಾಗಬೇಕು. ಇಂತಹ ಸಂಸ್ಕರಣ ವಿಧಾನಗಳ ಲಾಭ ಪಡೆಯಲು ರೈತರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಗ್ರಾಮಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ರಾಜ್ಯ ಸಂಯೋಜಕ ಲಿಂಗಣ್ಣ ಅವರು ಮಾತನಾಡಿ, ಗ್ರಾಮೀಣ ನಿರುದ್ಯೋಗ ಯುವಕರಿಗೆ ರಾಜ್ಯದಲ್ಲಿರುವ ರುಡ್ಸೆಟ್ ಮತ್ತು ಗ್ರಾಮಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ ವಿವಿಧ ಉದ್ಯೋಗ ಕೈಗೊಳ್ಳಲು ಉಚಿತ ತರಬೇತಿ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ಯುವ ಸಮುದಾಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಐಎನ್ಜಿ ವೈಶ್ಯ ಬ್ಯಾಂಕ್ನ ನಿರ್ದೇಶಕ ಕಪ್ಪತ್ತನವರ, ನಿವೃತ್ತ ಬ್ಯಾಂಕ್ ಅಧಿಕಾರಿ ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ.ಮೊಹರೆ, ಸಿ.ಎಸ್.ಬಿರಾದಾರ, ಲಕ್ಷ್ಮಣ ತಾಳಿಕೋಟಿ, ಬಸಮ್ಮ ಹಿರೇಮಠ ಇದ್ದರು. ಕೆಎಫ್ಆರ್ಸಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಸ್.ಹಾಲಳ್ಳಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.