ADVERTISEMENT

‘ಭೋವಿ ಸಮಾಜದ ಅಭಿವೃದ್ಧಿಗೆ ಬದ್ಧ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 8:56 IST
Last Updated 19 ಜನವರಿ 2018, 8:56 IST

ಹುನಗುಂದ: ‘ಭೋವಿ ಸಮಾಜಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಸಮುದಾಯದ ಸದಸ್ಯರಿಗೆ ಅಗತ್ಯ ಸೌಲಭ್ಯ ನೀಡಿದೆ’ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿಯ ಟಿಸಿಎಚ್ ಕಾಲೇಜು ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಭೋವಿ ಸಮಾಜದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರರ 846ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಭೋವಿ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಶಕ್ತವಾಗಿ ಮತ್ತು ಸಂಘಟಿತವಾಗಿ ಮುನ್ನಡೆಯಲು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು. ಮಾರ್ಚ್‌ ತಿಂಗಳಲ್ಲಿ ವಿಜಯಪುರದಲ್ಲಿ ಸಮಾಜದ ಸಮಾವೇಶವನ್ನು ಹಮ್ಮಿಕೊಂಡು ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಲಿದ್ದೇವೆ. ಅದರ ಉಸ್ತುವಾರಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರಿಗೆ ವಹಿಸಲಿದ್ದಾರೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಭೋವಿ ಸಮಾಜದ ಸಮುದಾಯ ಭವನಕ್ಕೆ ಹುನಗುಂದದಲ್ಲಿ ಸ್ವಂತ ಸ್ಥಳ ನೀಡುವೆ. ಈಗಾಗಲೇ ಭವನ ನಿರ್ಮಾಣಕ್ಕೆ ಇಳಕಲ್‌ನಲ್ಲಿ ₹ 25 ಲಕ್ಷ ಹಾಗೂ ತಿಮ್ಮಾಪುರದಲ್ಲಿ ₹ 10 ಲಕ್ಷ ಮೊತ್ತದ ಟೆಂಡರ್ ಕರೆಯಲಾಗಿದೆ. ಗುಡೂರಿನಲ್ಲಿ ₹ 15 ಲಕ್ಷ ವೆಚ್ಚದ ಭವನ ನಿರ್ಮಾಗೊಂಡಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಭೋವಿ ಸಮಾಜವು ಸುಖ ದು:ಖ ಎರಡನ್ನೂ ಸಮಾನವಾಗಿ ಸ್ವೀಕರಿದೆ. ನಿತ್ಯ ಕಲ್ಲು ಮಣ್ಣಿನೊಂದಿಗೆ ಶ್ರಮಿಸುವ ಈ ಸಮಾಜ ಇತರ ಸಮುದಾಯದ ಒಳಿತಿಗೆ ತನ್ನ ಸಮರ್ಪಿಸಿಕೊಂಡಿದೆ’ ಎಂದರು.

ಗಜೇಂದ್ರಗಡದ ಕನ್ನಡ ಉಪನ್ಯಾಸಕ ಅರವಿಂದ ವಡ್ಡರ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪುರಸಭೆಯ ಅಧ್ಯಕ್ಷೆ ಗಂಗಮ್ಮ ಎಮ್ಮಿ, ಸದಸ್ಯೆ ಭಾಗ್ಯಶ್ರೀ ಕುಷ್ಟಗಿ, ಶರಣಪ್ಪ ಹಾದಿಮನಿ, ದುರಗಪ್ಪ ಕನ್ನೂರ, ಹುಲ್ಲಪ್ಪ ಹಳ್ಳೂರ, ದಾನಮ್ಮ ಹಾದಿಮನಿ, ಮಹಾಂತೇಶ ಮೂಲಿಮನಿ, ತಿರುಪತಿ ಕುಷ್ಟಗಿ, ಗದ್ದೆಪ್ಪ ಬಂಡಿವಡ್ಡರ, ಯಂಕಪ್ಪ ಗೌಂಡಿ, ಸಂಗಪ್ಪ ಚಿತ್ತವಾಡಗಿ, ತಹಸೀಲ್ದಾರ ಎಸ್.ಎಸ್.ಸಂಪಗಾವಿ, ಇಒ ಎಸ್.ಎಚ್.ಅಂಗಡಿ, ಐ.ಜಿ. ಕೊಣ್ಣೂರ, ಮುರಳಿಧರ ದೇಶಪಾಂಡೆ, ರವಿ ಇದ್ದಲಗಿ, ಗೋವಿಂದ ಬಂಡಿವಡ್ಡರ, ಮಹಾಂತೇಶ ಹಲಕುರ್ಕಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.