ಮುಧೋಳ: ‘ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಕೇವಲ 5.30 ಲಕ್ಷ ಅಡುಗೆ ಅನಿಲ ಸಂಪರ್ಕ ನೀಡಲಾಗಿತ್ತು. ಪ್ರಧಾನಿ ಮೋದಿ ಅವರು ಕೇವಲ 3 ವರ್ಷಗಳಲ್ಲಿ 6 .90 ಕೋಟಿ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುವುದರ ಮೂಲಕ ಬಡ ಮಹಿಳೆಯ ನೆರವಿಗೆ ಧಾವಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ರೇಷ್ಮೆ ಬೆಳೆಗಾರರ ಪ್ರಕೋಷ್ಠದ ಅಧ್ಯಕ್ಷ ಲೋಕೇಶಗೌಡ ಹೇಳಿದರು.
ಗುರುವಾರ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರಧಾನಿಯಾಗಿದ್ದ ರಾಜೀವ ಗಾಂಧಿ ಅವರು ಸೌಲಭ್ಯದ ಶೇ 30 ಸೋರಿಕೆಯಾಗಿ ಕೇವಲ ಶೇ 70 ಪಲಾನುಭವಿಗಳಿಗೆ ತಲುಪುತ್ತಿದೆ ಎಂದು ಹೇಳಿದ್ದರು.
ಆದರೆ ನರೇಂದ್ರ ಮೋದಿಯವರು ನೇರವಾಗಿ ಪ್ರತಿ ಫಲಾನುಭವಿಗೆ ಸಂಪೂರ್ಣ ತಲುಪಲು ಪಾರದರ್ಶಕವಾದ ಜನಧನ ಮುಂತಾದ ಯೋಜನೆಗಳನ್ನು ಜಾರಿ ತಂದಿದ್ದಾರೆ. ರಾಜ್ಯದಲ್ಲಿ 187 ತಾಲ್ಲೂಕು ಬರಗಾಲದಿಂದ ತತ್ತರಿಸಿವೆ.
ಸಾವಿರು ರೈತರು ಆತ್ಮಹತ್ಯೆ ಮಾಡಿಕೊಂಡರೂ ನೆರವಿಗೆ ಬಾರದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಹಾಗೂ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಪ್ರತಿ ಕಾರ್ಯಕರ್ತರು ಮತದಾರರ ಬಳಿ ಹೋಗಿ ಕಾಂಗ್ರೆಸ್ ವೈಫಲ್ಯಗಳನ್ನು ವಿವರಿಸಬೇಕು’ ಎಂದು ಹೇಳಿದರು.
ಶಾಸಕ ಗೋವಿಂದ ಕಾರಜೋಳ, ಕಾಡಪ್ಪ ಕಡಪಟ್ಟಿ, ಕುಮಾರ ಹುಲ ಕುಂದ, ಪರುಶರಾಮ ಮುರನಾಳ, ನಾಗಪ್ಪ ಅಂಬಿ, ಕೆ.ಆರ್.ನಾಯಕ, ಯಶವಂತ ಘೋರ್ಪಡೆ, ಮಲ್ಲಪ್ಪ ಗಣಿ, ಸೋಮಲಿಂಗ ಕಾಂಬಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.