ADVERTISEMENT

ಕೊಟ್ಟೂರೇಶ್ವರ ಬೆಳ್ಳಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 6:21 IST
Last Updated 6 ಡಿಸೆಂಬರ್ 2017, 6:21 IST

ಕೂಡ್ಲಿಗಿ: ತಾಲ್ಲೂಕಿನ ಕೊಟ್ಟೂರು ಪಟ್ಟಣದ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತೀಕೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಸ್ವಾಮಿಯ ಬೆಳ್ಳಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, ದೇವಸ್ಥಾನದ ಆವರಣ ರಸ್ತೆ, ಊರಮ್ಮನ ಬಯಲು, ತೊಟ್ಟಿಲು ಮಠ ಮತ್ತು ಗಚ್ಚಿನಮಠದ ಮುಂದೆ ಜಮಾಯಿಸಿದ್ದರು. ರಾತ್ರಿ 11.45ರ ಸುಮಾರಿಗೆ ಹಿರೇಮಠದಲ್ಲಿ ಸ್ವಾಮಿ ಮೂರ್ತಿಯನ್ನು ಅರ್ಚಕರ ಬಳಗ ಸಮಾಳ ವಾದ್ಯಗಳೊಂದಿಗೆ ಹೊರತಂದು ರಥದಲ್ಲಿ ಕೂರಿಸಿದರು. ಆ ಕ್ಷಣದಲ್ಲಿ ಭಕ್ತರು ಜಯಘೋಷ ಹಾಕುತ್ತಾ ಬಾಳೆಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ಅಲ್ಲಿಂದ ಹೊರಟ ಉತ್ಸವ ತೊಟ್ಟಿಲು ಮಠ, ಊರಮ್ಮನ ಬಯಲಿನ ಮೂಲಕ ಗಚ್ಚಿನ ಮಠಕ್ಕೆ ತೆರಳಿತು. ಅಲ್ಲಿ 1 ಗಂಟೆಗೂ ಹೆಚ್ಚು ಕಾಲ ಭಕ್ತರು ವಡುಪುಗಳನ್ನು ಹೇಳಿದರು. ಮತ್ತೆ ಸ್ವಾಮಿಯ ಉತ್ಸವ ಬೆಳಗಿನ ಜಾವ 4 ಗಂಟೆಗೆ ಹಿರೇಮಠದಲ್ಲಿ ಸಂಪನ್ನಗೊಂಡಿತು. ಕ್ರಿಯಾಮೂರ್ತಿ ಕೊಟ್ಟೂರು ದೇವರು ಸಾನ್ನಿಧ್ಯ ವಹಿಸಿದ್ದರು.
ಲಕ್ಷ ದೀಪೋತ್ಸವ:ಕಾರ್ತೀಕೋತ್ಸವ ಪ್ರಯುಕ್ತ ಇಲ್ಲಿನ ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿಯವರು ಲಕ್ಷ ದೀಪೋತ್ಸವ ನಡೆಸಿದರು. ಮುಖ್ಯ ರಸ್ತೆಯುದ್ದಕ್ಕೂ ಎರಡು ಬದಿಗಳಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಹಣತೆಗಳಿಗೆ ಭಕ್ತರು ಎಣ್ಣೆ ಹಾಕಿ ದೀಪ ಬೆಳಗಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.