ADVERTISEMENT

ಜೋಳದ ಬೆಳೆ ಸಮೃದ್ಧಿ: ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 7:08 IST
Last Updated 17 ಡಿಸೆಂಬರ್ 2017, 7:08 IST

ಸಿರುಗುಪ್ಪ: ತಾಲ್ಲೂಕಿನ ಬೂದುಗುಪ್ಪ ಗ್ರಾಮದಲ್ಲಿ ಭತ್ತಕ್ಕೆ ಪರ್ಯಾಯವಾಗಿ ರೈತರು ವಿವಿಧ ಕಂಪೆನಿಗಳ ಜೋಳ ಬಿತ್ತನೆ ಮಾಡಿದ್ದರಿಂದ ಬೆಳೆಯು ಸಮೃದ್ಧವಾಗಿ ಬೆಳೆದಿದ್ದು ರೈತರಲ್ಲಿ ಸಂತಸ ತಂದಿದೆ.

ರೈತರಾದ ಚಂದ್ರಶೇಖರರೆಡ್ಡಿ ಹಾಗೂ ಲಕ್ಷ್ಮಿಕಾಂತರೆಡ್ಡಿ ಅವರ ಜಮೀನಿಗೆ ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಎ.ಬಸವಣ್ಣೆಪ್ಪ, ಕೃಷಿ ವಿಜ್ಞಾನಿ ಮತ್ತು ರೈತರು ಶನಿವಾರ ಭೇಟಿ ನೀಡಿ ಜೋಳ ಬೆಳೆದ ರೈತರೊಂದಿಗೆ ಸಂವಾದ ನಡೆಸಿದರು.

ಹೈಟೆಕ್ ಮಹಾಲಕ್ಷ್ಮೀಗೋಲ್ಡ್, ಮಹೇಂದ್ರ 343, ಮೈಕೋ 51, ಮಹಾಲಕ್ಷ್ಮಿ 296 ತಳಿಗಳ ಜೋಳವನ್ನು ರೈತರು ಬಿತ್ತನೆ ಮಾಡಿದ್ದು, ಉತ್ತಮ ಬೆಳೆ ಬಂದಿದೆ. ಕೆಲವು ಕಡೆ ಸುಳಿನೊಣದ ಬಾಧೆಯಿಂದ ಜೋಳದ ಬೆಳೆಯಲ್ಲಿ ಸುಳಿ ಬಿದ್ದಿದೆ . ಇದಕ್ಕೆ ಕೊರೆಜಿನ್ ಔಷಧಿಯನ್ನು ಒಂದು ಲೀಟರ್ ನೀರಿಗೆ 0.3 ಎಂ.ಎಲ್. ಅಥವಾ ಇನೋಮೆಸಿನ್ ಬೆಂಜೋಯೇಟ್ ಒಂದು ಲೀಟರ್ ನೀರಿಗೆ 0.2ಗ್ರಾಂ, ಬೆರೆಸಿ ಒಂದು ಎಕರೆಗೆ 200 ಲೀಟರ್ ದ್ರಾವಣವನ್ನು ಸಿಂಪಡಿಸಬೇಕು. ಜೋಳದಲ್ಲಿ ಕಾಣಿಸಿಕೊಳ್ಳುವ ಅಂಟುಜಿಗಿ ಕೀಟಕ್ಕೆ ಇಮಿಡಾ ಕ್ಲೋರಿಫಿಡ್ ಒಂದು ಲೀಟರ್ ನೀರಿಗೆ 0.5ಎಂ.ಎಲ್. ನಂತೆ ಎಕರೆಗೆ 200 ಲೀಟರ್ ದ್ರಾವಣವನ್ನು ಸಿಂಪಡಿಸಬೇಕು ಎಂದು ರೈತರಿಗೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದರು.

ADVERTISEMENT

ಜೋಳ ಕೊಯ್ಲಿನ ನಂತರ ನವಣೆ, ಸಾಸುವೆ, ಎಳ್ಳು, ಅವಂಜಿ, ಪಿಳ್ಳೆ ಪಿಸುರು, ಉದ್ದು ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ರೈತರಿಗೆ ತಿಳಿಸಿದರು. ರಸಗೊಬ್ಬರಗಳ ಬಳಕೆ ಕುರಿತು ಮಣ್ಣು ವಿಜ್ಞಾನಿ ಅಶೋಕ್‌ಕುಮಾರ್‌ಗಡ್ಡಿ ಅವರು ರೈತರಿಗೆ ಸಲಹೆ ನೀಡಿದರು. ಬಸವನಗೌಡ, ಗ್ರಾಮದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.