ಬಳ್ಳಾರಿ: ಈಗ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಸಂಪೂರ್ಣವಾಗಿ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಳೆಯ ಪ್ರವಾಸಿ ಮಂದಿರಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗುವುದು. ವಸ್ತುಸಂಗ್ರಹಾಲಯಕ್ಕಾಗಿ ₹ 30 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.
ಕೌಶಲ ಕರ್ನಾಟಕ:
15ರಂದು ಜಿಲ್ಲೆಯಲ್ಲಿ ಕೌಶಲ ಕರ್ನಾಟಕ ಕಾರ್ಯಕ್ರಮದ ಅಡಿ ನಿರುದ್ಯೋಗಿಗಳ ನೋಂದಣಿ 15ರಿಂದ 22ರವರೆಗೂ ನಡೆಯಲಿದೆ. ಐದು ವಿವಿಧ ಹುದ್ದೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ನಂತರದ ಎರಡು ತಿಂಗಳಲ್ಲಿ ತರಬೇತಿ ನೀಡಲಾಗುವುದು. ಅಗತ್ಯಕ್ಕೆ ತಕ್ಕಂತೆ ವಸತಿ ಸಹಿತವಾಗಿ ಮತ್ತು ವಸತಿ ರಹಿತವಾಗಿ ತರರಬೇತಿಗೆ ಆಯ್ಕೆಮಾಡಲಾಗುವುದು ಎಂದರು.
ಸಂಡೂರಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಿದ್ದ 35 ಸಾವಿರ ನಿರುದ್ಯೋಗಿಗಳ ಪೈಕಿ 28 ಸಾವಿರ ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು. ಅವರಲ್ಲಿ 15 ಸಾವಿರ ಮಂದಿಗೆ ಉದ್ಯೋಗ ದೊರಕಿದೆ.ಉಳಿದ 13 ಸಾವಿರ ಮಂದಿಗೆ ಕೌಶಲ ಕಾರ್ಯಕ್ರಮದ ಅಡಿ ಉದ್ಯೋಗ ದೊರಕಿಸಲು ಆದ್ಯತೆ ನೀಡಲಾಗುವುದು ಎಂದರು.
ಸ್ವಚ್ಛ ಬಳ್ಳಾರಿ:
ಸ್ವಚ್ಛ ಬಳ್ಳಾರಿ–ಸ್ವಸ್ಥ ಬಳ್ಳಾರಿ ಕಾರ್ಯಕ್ರಮದ ಅಡಿಯಲ್ಲಿ ಪಾಲಿಕೆಯ ಹಳೇ ಆಡಳಿತ ಕಚೇರಿಯ ಗೋಡೆಯ ಮೇಲೆ ಪೌರಕಾರ್ಮಿಕರು ಚಿತ್ರಕಲಾಕೃತಿಗಳನ್ನು ರಚಿಸಿದ್ದಾರೆ. ಬಯಲು ಶೌಚಾಲಯವಾಗಿದ್ದ ಆ ಪ್ರದೇಶ ಈಗ ಸ್ವಚ್ಛವಾಗಿ ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.