ಹೊಳಲು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕದ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಅಪಾರ ಜೀವಜಲ ವ್ಯರ್ಥವಾಗುತ್ತಿದೆ.
ಘಟಕದಲ್ಲಿ ಎರಡು ಸಾವಿರ ಲೀಟರ್ ನೀರು ಶುದ್ಧಿಯಾಗಬೇಕಾದರೆ ಅದರಿಂದ ಅರ್ಧದಷ್ಟು ನೀರು ತ್ಯಾಜ್ಯವಾಗಿ ಹೊರಬರುತ್ತದೆ. ಒಂದು ಸಾವಿರ ಲೀಟರ್ ನೀರು ಹೊರಬರುತ್ತದೆ. ಹೀಗೆ ಪ್ರತಿದಿನ ಮೂರು ಬಾರಿಯಾದರೂ ಘಟಕದಿಂದ ಸುಮಾರು ಮೂರು ಸಾವಿರ ಲೀಟರ್ ನೀರನ್ನು ಪೋಲು ಮಾಡಲಾಗುತ್ತಿದೆ.
ಈ ರೀತಿ ಪ್ರತಿನಿತ್ಯ ಸಾವಿರಾರು ಲೀಟರ್ ನೀರನ್ನು ಅನಾವಶ್ಯಕವಾಗಿ ಗಟಾರಕ್ಕೆ ಹರಿಸಿ ಪೋಲು ಮಾಡುವ ಬದಲು, ಆಸ್ಪತ್ರೆಯ ಆವರಣದಲ್ಲಿ ಒಣಗುತ್ತಿರುವ ಗಿಡ ಮರಗಳಿಗೆ ಹರಿಸುವುದರಿಂದ ಹಸಿರು ವಾತಾವರಣ ಕಾಪಾಡಿಕೊಳ್ಳಬಹುದು.
ಜೊತೆಗೆ ಸುತ್ತಲೂ ಮತ್ತಷ್ಟು ಸಸಿ ನೆಟ್ಟು ಆಸ್ಪತ್ರೆಯ ಆವರಣವನ್ನು ಹಚ್ಚ ಹಸಿರು ಮಾಡಬಹುದು. ಶುದ್ಧ ನೀರಿನ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡದರೆ ಯಾವುದೇ ಸಮಸ್ಯೆ ಬರುವುದಿಲ್ಲ. ನಿರ್ವಹಣೆ ಕೊರತೆ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
ರಾಜ್ಯದೆಲ್ಲಡೆ ಜೀವ ಜಲ ಬತ್ತಿಹೋಗಿ ಹನಿ ನೀರಿಗೂ ಪರದಾಡುವ ಸ್ಥಿತಿ ಇದೆ. ‘ಗ್ರಾಮ ಪಂಚಾಯ್ತಿಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರಿಗೆ ನೀರಿನ ಸದ್ಬಳಕೆಯ ಅರಿವು ಇಲ್ಲದೆ ಇರುವುದರಿಂದ ಪೋಲಾಗುತ್ತಿರುವ ನೀರನ್ನು ಸಂರಕ್ಷಿಸುವವರು ಇಲ್ಲದಂತಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು ನಿತ್ಯ ಪೋಲಾಗುತ್ತಿರುವ ನೀರನ್ನು ಸಂರಕ್ಷಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.