ADVERTISEMENT

ಮಂಜೂರಾಗದ ಪ್ರೌಢಶಾಲೆ, ತೆರೆಯದ ಪಶು ಆಸ್ಪತ್ರೆ

ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮೊಟಕು: ಆತಂಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:55 IST
Last Updated 10 ಜುಲೈ 2017, 11:55 IST
ಮಂಜೂರಾಗದ ಪ್ರೌಢಶಾಲೆ, ತೆರೆಯದ ಪಶು ಆಸ್ಪತ್ರೆ
ಮಂಜೂರಾಗದ ಪ್ರೌಢಶಾಲೆ, ತೆರೆಯದ ಪಶು ಆಸ್ಪತ್ರೆ   

ಮರಿಯಮ್ಮನಹಳ್ಳಿ: ಪೋತಲಕಟ್ಟೆ ತಾಲ್ಲೂಕಿನ ಕಟ್ಟಕಡೆಯ ಪುಟ್ಟ ಗ್ರಾಮ. ಅಲ್ಲಿ ಜನರಿಗಿಂತ ಜಾನುವಾರ ಸಂಖ್ಯೆ ಯೇ ಅಧಿಕ, ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಹಿರಿಯ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಪಶು ಆಸ್ಪತ್ರೆ ತೆರೆಯುವುದು ಕನಸಾಗಿಯೇ ಉಳಿದಿದೆ.

ಹೊಸಪೇಟೆಯಿಂದ 32ಕಿ.ಮೀ ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ದಿಂದ 16 ಕಿ.ಮೀ ದೂರದಲ್ಲಿದೆ. ಹಿಂದುಳಿದ ಕೃಷಿಕರೇ ಹೆಚ್ಚಿನ ಸಂಖ್ಯೆ ಯಲ್ಲಿರುವ ಈ ಗ್ರಾಮ ಎರಡು ಸಾವಿರ ಜನಸಂಖ್ಯೆ ಹೊಂದಿದೆ. ಮೂರು ಸಾವಿರಗಿಂತ ಅಧಿಕ ಜಾನುವಾರಗಳಿವೆ. ಗ್ರಾಮಕ್ಕೆ ಸರ್ಕಾರಿ ಬಸ್‌ ಬರುವುದು ಒಂದೇ. ಪ್ರತಿಯೊಂದಕ್ಕೂ ಆಟೊಗಳನ್ನೆ ಅವಲಂಬಿಸಬೇಕಾಗಿದೆ.

ಗ್ರಾಮದ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ 300 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂಬ ತ್ತನೇ ತರಗತಿಗೆ ಒಂಬತ್ತು ಕಿ.ಮೀ. ದೂರದ ತೆಲಗುಬಾಳು ಪ್ರೌಢಶಾಲೆಗೆ ಹೋಗಬೇಕಿದೆ.

ADVERTISEMENT

ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಪ್ರತಿವರ್ಷ ಎಂಟನೇ ತರಗತಿ ಓದಿ ಪಾಸಾದ ಹೆಣ್ಣು ಮಕ್ಕಳಲ್ಲಿ ಕೆಲವರು ಮಾತ್ರ ಮುಂದಿನ ತರಗತಿಗೆ ಹೋದರೆ, ಬಹುತೇಕರು ಎಂಟಕ್ಕೇ ಶಿಕ್ಷಣ ಮೊಟಕುಗೊಳಿಸು ತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾ ಧಾನ ವ್ಯಕ್ತಪಡಿಸುತ್ತಾರೆ.

ಗ್ರಾಮದ ಶಾಲೆಯನ್ನು ಮೇಲ್ದರ್ಜೆ ಗೇರಿಸುವಂತೆ ಈ ಹಿಂದೆ ಮನವಿ ಮಾಡಿ ದಾಗ ಸ್ಥಳದ ಸಮಸ್ಯೆ ಎದುರಾಯಿತು. 2011ರಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ₹3.60ಲಕ್ಷ ಭರಿಸಿ ಹೊರವಲಯದ ಸರ್ವೆ ನಂ.92/ಎ ರಲ್ಲಿ 1.60 ಸೆಂಟ್ಸ್‌ ಭೂಮಿ ಖರೀದಿಸಿ ಸರ್ಕಾರದ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ನೋಂದಣಿ ಮಾಡಿಕೊಡಲಾಯಿತು.

ಆದರೆ, ಇಲ್ಲಿಯವರೆಗೆ ಕಟ್ಟಡ ನಿರ್ಮಾಣ ಮಾಡಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಹಾಗೂ ಸದಸ್ಯರು ದೂರುತ್ತಾರೆ.

ಗ್ರಾಮದಲ್ಲಿ ಜಾನುವಾರು ಸಂಖ್ಯೆ ಅಧಿಕವಾಗಿರುವುದರಿಂದ ಪಶು ಆಸ್ಪತ್ರೆ ತೆರೆಯುವಂತೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಹಿಂದೆ ಮಂಜೂ ರಾಗಿದ್ದ ಪಶು ಆಸ್ಪತ್ರೆಯನ್ನು ಬೇರೆ ಗ್ರಾಮಕ್ಕೆ ವರ್ಗಾಯಿಸಲಾಯಿತು ಎಂದು ಗ್ರಾಮದ ರೈತರು ಆರೋಪಿಸಿದರು.

‘ನೋಡ್ರಿ ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು. ಆಗಲೂ ಗ್ರಾಮಸ್ಥರು ಈ ಬೇಡಿಕೆಗಳನ್ನು ಇಟ್ಟಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಎಪ್ಪತ್ತು ಇದ್ದರೆ ಮೇಲ್ದರ್ಜೆಗೆ ಏರಿಸಬೇಕು. ಆದರೆ, ಇಲ್ಲಿ ಆಗಿಲ್ಲ. ಖಾಸಗಿ ಶಾಲೆಗಳಲ್ಲಿ 10–12 ಮಕ್ಕಳಿದ್ದರೂ ಪ್ರೌಢಶಾಲೆಗೆ ಮಂಜೂರಾತಿ ನೀಡುತ್ತಾರೆ. ಇಂತಹ ತಾರತಮ್ಯ ಏಕೆ ಎಂದು ಗ್ರಾಮದ ಜಂಭಣ್ಣ ಪ್ರಶ್ನಿಸಿದರು.
–ಎಚ್.ಎಸ್.ಶ್ರೀಹರಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.