ADVERTISEMENT

ರಸ್ತೆಯೇ ಸಂತೆ, ಪ್ರಾಣ ಭೀತಿಯ ಚಿಂತೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 6:27 IST
Last Updated 28 ಜೂನ್ 2017, 6:27 IST
ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ವಾಹನಗಳನ್ನು ಲೆಕ್ಕಿಸದೆ ಹಣ್ಣು ಮಾರುತ್ತಿರುವುದು
ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಗ್ರಾಮದ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ವಾಹನಗಳನ್ನು ಲೆಕ್ಕಿಸದೆ ಹಣ್ಣು ಮಾರುತ್ತಿರುವುದು   

ಕಾನಹೊಸಹಳ್ಳಿ(ಕೂಡ್ಲಿಗಿ): ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಕಾನ ಹೊಸಹಳ್ಳಿ ಗ್ರಾಮದಲ್ಲಿ ವಾರದ ಸಂತೆಗೆ ಸೂಕ್ತ ಸ್ಥಳದ ವ್ಯವಸ್ಥೆ ಇಲ್ಲದೆ ವ್ಯಾಪಾರಿ ಗಳು ಹಾಗೂ ಗ್ರಾಹಕರು ಪರದಾಡು ವಂತಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಸಣ್ಣ ವ್ಯಾಪಾರಿಗಳು ಪ್ರಾಣದ ಹಂಗು ತೊರೆದು ವ್ಯಾಪಾರ ನಡೆಸುವ ಅನಿವಾರ್ಯತೆ ಇದೆ.

ಕಾನಹೊಸಹಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದರೂ ತಾಲ್ಲೂಕು ಕೇಂದ್ರಕ್ಕೆ ಸರಿ ಸಮನಾಗಿ ಬೆಳೆಯುತ್ತಿದೆ. ಗ್ರಾಮವು ಸುಮಾರು 10 ಸಾವಿರ ಜನಸಂಖ್ಯೆ ಹೊಂದಿದೆ. ಇದರಿಂದ ವಾಹನಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತದೆ.

ಹೊಸಹಳ್ಳಿ, ಆಲೂರು, ಹೀರೇಕುಂಬಳ ಗುಂಟೆ, ಪೂಜಾರಹಳ್ಳಿ, ಜುಮ್ಮೋಬನ ಹಳ್ಳಿ, ಹಾರಕಭಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳ ಜನರು ಸಂತೆಗೆ ಬರುತ್ತಾರೆ. ಹಣ್ಣು, ತರಕಾರಿ, ಕೃಷಿ ಸಾಮಗ್ರಿ ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ಮಾರಾಟ ಮಾಡಲು 250ಕ್ಕೂ ಹೆಚ್ಚು ವ್ಯಾಪಾರಸ್ಥರು ಸೇರುತ್ತಾರೆ.

ADVERTISEMENT

ಆದರೆ ಇವರಿಗೆ ವ್ಯಾಪಾರ ಮಾಡಲು ಸೂಕ್ತ ಜಾಗವಿಲ್ಲ. ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡಬೇಕಾಗಿದೆ. ವ್ಯಾಪಾರಿಗಳು ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೂ ತೊಂದರೆಯಾಗಿದೆ.

ಬೆಂಗಳೂರು ಹಾಗೂ ವಿಜಯ ಪುರಗಳ ಮಧ್ಯ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 50 ಗ್ರಾಮ ಹೊರವಲಯದಲ್ಲಿ ಹಾದು ಹೋಗಿದೆ. ಲಾರಿ, ಬಸ್, ಕಂಟೇನರ್‌ ಸೇರಿದಂತೆ ನಿತ್ಯ ಸಾವಿರಾರು  ಬೃಹತ್ ಗಾತ್ರದ ವಾಹನಗಳು ವೇಗವಾಗಿ ಹೋಗುತ್ತವೆ.

ಪಕ್ಕದಲ್ಲಿಯೇ ಬಸ್ ನಿಲ್ದಾಣ ಇರುವು ದರಿಂದ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕಡೆ ಬಂದು ಹೋಗುವ ನೂರಾರು ಸರ್ಕಾರಿ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದು, ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ಎಲ್ಲಿ ಅಪಘಾತ ಸಂಭವಿಸುತ್ತದೆಯೋ ಎಂಬ ಭಯ ಇಲ್ಲಿನ ಸ್ಥಳೀಯರನ್ನು ಕಾಡುತ್ತಿದೆ. 

ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳ ಸ್ಥಿತಿಯಂತೂ ಹೇಳ ತೀರದು. ರಸ್ತೆ ಬದಿಯಲ್ಲಿ ಹೋಗೋಣ ಎಂದರೆ ಅಂಗಡಿಗಳು. ರಸ್ತೆಯಲ್ಲಿ ಹೋಗೋಣ ಎಂದರೆ ವಾಹನಗಳ ಭಯ. ಯಾವ ಕಡೆಯಿಂದ ಹೋಗ ಬೇಕು ಎಂಬುದೇ ತಿಳಿಯದಂತಾಗಿದೆ.

ಸಂತೆಯಲ್ಲಿ ಕರ ವಸೂಲಿ ಮಾಡಲು ಪ್ರತಿ ವರ್ಷ ಹರಾಜು ಕೂಡಲಾಗುತ್ತದೆ. ಈ ವರ್ಷ ₹1.85ಲಕ್ಷ ಕರ ಆಕರಣೆ ಯಾಗಿದೆ. ಇಷ್ಟೆಲ್ಲ ಆದಾಯ ವಿದ್ದರೂ ಸಂತೆಯಲ್ಲಿ ಕುಡಿವ ನೀರು ಸೇರಿ ದಂತೆ ಯಾವುದೇ ಮೂಲ ಸೌಕರ್ಯ ಗಳನ್ನು ಕಲ್ಪಿಸಲಾಗಿಲ್ಲ ಎಂದು ವ್ಯಾಪಾರ ಸ್ಥರು ದೂರುತ್ತಾರೆ. ತಾಲ್ಲೂಕು ಹಾಗೂ ಸ್ಥಳೀಯ ಆಡಳಿತ ಸೂಕ್ತ ಜಾಗದಲ್ಲಿ ಗುರುತಿಸಿ ಸಂತೆಯನ್ನು ಸ್ಥಳಾಂತರಿಸ ಬೇಕು ಎಂದು ಒತ್ತಾಯಿಸಿದ್ದಾರೆ.

* * 

ಅಂಕಿ ಅಂಶ
10ಸಾವಿರ ಗ್ರಾಮದ ಒಟ್ಟು ಜನಸಂಖ್ಯೆ

250 ಸಂತೆಯಲ್ಲಿ ವಹಿವಾಟು ನಡೆಸುವ ವ್ಯಾಪಾರಿಗಳು

₹1.85ಲಕ್ಷ ಸಂತೆಯಿಂದ ಬರುವ ವಾರ್ಷಿಕ ಆದಾಯ

* * 

ಗ್ರಾಮದಲ್ಲಿ ನಡೆಯುವ ಸಂತೆಗೆ ಸಾವಿರಾರು ಜನರು ಬರುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಜೀವ ಕೈಯಲ್ಲಿ ಹಿಡಿದು ವ್ಯಾಪಾರ ಮಾಡಬೇಕು
ಎಚ್.ಎಂ. ಪ್ರಭುಶಂಕರ್, ಎಳೆ ನೀರು ಮಂಜಣ್ಣ
ಹೊಸಹಳ್ಳಿ  ಗ್ರಾಮದ ವ್ಯಾಪಾರಿಗಳು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.