ADVERTISEMENT

‘ರೈತ ಸ್ನೇಹಿ ನೇರ ಕೂರಿಗೆ ಭತ್ತ ಬೇಸಾಯ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 10:22 IST
Last Updated 14 ಜುಲೈ 2017, 10:22 IST

ಕಂಪ್ಲಿ: ‘ಕಡಿಮೆ ಖರ್ಚು ಅಧಿಕ ಲಾಭ ತಂದುಕೊಡುವ ಕೂರಿಗೆ ಭತ್ತದ ಬೇಸಾಯ ಇತ್ತೀಚೆಗೆ ರೈತ ಸ್ನೇಹಿಯಾಗುತ್ತಿದೆ’ ಎಂದು ಇಲ್ಲಿಯ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ ಶ್ರೀಧರ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಚಿಕ್ಕಜಾಯಿಗನೂರು ಗ್ರಾಮದ ಪ್ರಗತಿಪರ ರೈತ ಜಿ. ಅಮರೇಗೌಡ ರಾಮನಗೌಡರ ಗದ್ದೆಯಲ್ಲಿ ಬುಧವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ನೇರ ಕೂರಿಗೆ ಭತ್ತ ಬಿತ್ತನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೂರಿಗೆ ಭತ್ತದ ಇಳುವರಿ ನಾಟಿ ಮಾಡಿದ ಭತ್ತದ ಇಳುವರಿಯಷ್ಟೇ ಇರುತ್ತದೆ. ಕೆಲವೊಮ್ಮೆ ನಾಟಿ ಮಾಡಿದ ಭತ್ತಕ್ಕಿಂತಲೂ ಪ್ರತಿ ಎಕರೆಗೆ ಒಂದರಿಂದ ಎರಡು ಕ್ವಿಂಟಾಲ್‌ ಹೆಚ್ಚು ಇಳುವರಿ ಬರುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದರು.

ADVERTISEMENT

‘ಭತ್ತ ಕೂರಿಗೆ ಬಿತ್ತನೆ ಮಾಡುವ ರೈತರಿಗೆ ಎಕರೆಗೆ ₹1,600 ಪ್ರೋತ್ಸಾಹಧನ ನೀಡುತ್ತಿದ್ದು, ಇದರ ಮಿತಿ ಐದು ಎಕರೆಗೆ ನಿಗದಿಪಡಿಸಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಂಪ್ಲಿ ಹೋಬಳಿಯಲ್ಲಿ ಸುಮಾರು 2,500 ಎಕರೆ ಪ್ರದೇಶದಲ್ಲಿ ಭತ್ತ ಕೂರಿಗೆ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ 25 ಎಕರೆಯಲ್ಲಿ ನೇರ ಬಿತ್ತನೆ  ಮಾಡಲಾಗಿದೆ’ ಎಂದು ಶ್ರೀಧರ್‌ ಅವರು ವಿವರಿಸಿದರು.

ಪ್ರಗತಿಪರ ರೈತ ಜಿ. ಅಮರೇಗೌಡ ಅವರ ಕೊಳವೆಬಾವಿ ಆಧರಿತ ಐದು ಎಕರೆ ಗದ್ದೆಯಲ್ಲಿ ಯಂತ್ರ ಬಳಿಸಿ ನೇರ ಕೂರಿಗೆ ಭತ್ತ ಬಿತ್ತನೆ ಮಾಡಲಾಯಿತು. ಅನುವುಗಾರ ಅಮರೇಗೌಡ, ತಿಮ್ಮಾರೆಡ್ಡಿ, ರಾಮನಗೌಡ, ಹರೀಷ್, ಚಂದ್ರಪ್ಪ, ರಾಜು, ರೈತ ಮುಖಂಡ ಪುರುಷೋತ್ತಮ ಗೌಡ, ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.