ಕುರುಗೋಡು: ‘ ಸ್ಥಳೀಯರಿಗೆ ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡ ವಿ.ಎಸ್. ಶಿವಶಂಕರ್ ಒತ್ತಾಯಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಮತ್ತು ಸಿರಿಗನ್ನಡ ಯುವಕ ಸಂಘ ಶನಿವಾರ ಜಂಟಿಯಾಗಿ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಎಚ್. ಹುಸೇನ್ ಬಾಷ ಮಾತನಾಡಿ, ‘ನಾಡು–ನುಡಿ ಸಮಸ್ಯೆ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು.
ಸಾಧಕರಾದ ನಿವೃತ್ತ ಶಿಕ್ಷಕಿ ಶಶಿಕಲಾ, ಸರ್ಕಾರಿ ಬಸ್ ನಿರ್ವಾಹಕ ಜಿ. ಮಂಜುನಾಥ, ಆರೋಗ್ಯ ಇಲಾಖೆಯ ಮುತ್ಯಾಲಮ್ಮ ರೈತ ಹೋರಾಟಗಾರ ವಿ.ಎಸ್. ಶಿವಶಂಕರ್ ಮತ್ತು ಕಲಾವಿದ ಹುಲಿಗಯ್ಯ ಅವರನ್ನು ಗಣ್ಯರು ಗೌರವಿಸಿದರು.
ಸಂಘದ ಅಧ್ಯಕ್ಷ ಎನ್. ಕೊಮಾರೆಪ್ಪ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಎ.ಕೆ. ಹನುಮಕ್ಕ, ಉಪಾಧ್ಯಕ್ಷೆ ಎನ್. ಗಾದಿಲಿಂಗಮ್ಮ, ಕೆ.ವಿರೂಪಾಕ್ಷ ಗೌಡ, ಜೆ. ಸೋಮಶೇಖರ ಗೌಡ, ಕೆ.ಎಸ್. ಖಾದರ್ ಬಾಷಾ, ಎಸ್. ಗೀತಾಬಾಯಿ, ಎನ್. ಪ್ರಹ್ಲಾದ್, ವೀರಭದ್ರಗೌಡ, ಹುಸೇನ್ ಬಾಷಾ, ನಾಗರಾಜ, ವೀರೇಶ, ಎಸ್.ಕೆ. ನಾಗರಾಜ, ಕೆ. ಲೋಕೇಶ್ ಮತ್ತು ಷಣ್ಮುಖ ಉಪಸ್ಥಿತರಿದ್ದರು. ಸ್ಥಳೀಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.