ದೇವನಹಳ್ಳಿ: ದೇವನಹಳ್ಳಿ ಪೊಲೀಸ್ ಠಾಣೆ ಎಸಿಪಿ ಶಿವಕುಮಾರ್ ವಿರುದ್ಧ ಕೇಳಿ ಬಂದಿರುವ ಆರೋಪದಲ್ಲಿ ಹುರುಳಿಲ್ಲ, ಆರೋಪ ಮಾಡಿರುವ ಮಹಿಳಾ ಪೇದೆ ಶಶಿಕಲಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿ (ಎಸ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವನಹಳ್ಳಿ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ವಾಹನಗಳಿಗೆ ತಡೆಯೊಡ್ಡಿ ಪಿವಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಿವಿಎಸ್ ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷ ಸೊಣ್ಣಪ್ಪನಹಳ್ಳಿ ಎಚ್.ಆನಂದ್ ಮಾತನಾಡಿ, ಶಿವಕುಮಾರ್ ಅವರು ಪಿಎಸ್ಐ ಆಗಿ ಕರ್ತವ್ಯ ಆರಂಭಿಸಿದಾಗಿನಿಂದ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈವರೆಗೂ ಇಲ್ಲ ಸಲ್ಲದ ಸುಳ್ಳು ಆರೋಪಗಳು ನಿರಂತರವಾಗಿಯೇ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಲೇ ಇದೆ ಎಂಬುದಕ್ಕೆ ಅನೇಕ ಪ್ರಕರಣಗಳು ಖುಲಾಸೆಗೊಂಡಿವೆ ಎಂದರು.
ಪಿವಿಸಿ ತಾಲ್ಲೂಕು ಅಧ್ಯಕ್ಷ ಸುಧಾಕರ್ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿಯ ಪೂರ್ವಾಪರ ಯೋಚಿಸದೆ ಗಾಳಿ ಸುದ್ದಿಗೆ ಮರುಳಾಗಿ ಅಧಿಕಾರಿಯ ವ್ಯಕ್ತಿತ್ವ ಹಾಳು ಮಾಡುವುದು ಸರಿಯಲ್ಲ ಎಂದು ದೂರಿದರು.
ಪಿವಿಸಿ ಮಹಿಳಾ ಘಟಕದ ಅಧ್ಯಕ್ಷೆ ನಾಗವೇಣಿ , ಯಲಹಂಕ ವಿಧಾನ ಸಭಾ ಕ್ಷೇತ್ರ ಪಿವಿಸಿ ಅಧ್ಯಕ್ಷ ಭಾಸ್ಕರ್, ಮಹಿಳಾ ಘಟಕ ಅಧ್ಯಕ್ಷ ನೀಲಮ್ಮ, ರಾಕೇಶ್ಗೌಸ್, ಗಿರೀಶ್ ಕುಮಾರ್, ಕಾರ್ತಿಕ್, ಮುನಿವೆಂಕಟಪ್ಪ, ಶ್ರೀರಾಮ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.