ದೇವನಹಳ್ಳಿ: ಕಣ್ಣು ಪರೀಕ್ಷೆ ಮತ್ತು ಚಿಕಿತ್ಸೆ ನಂತರವು ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಕೃಷಿಕ ಸಮಾಜ ಜಿಲ್ಲಾ ಘಟಕ ಅಧ್ಯಕ್ಷ ಆರ್.ರವಿಕುಮಾರ್ ತಿಳಿಸಿದರು.ಲಯನ್ ಸೇವಾ ಭವನದಲ್ಲಿ ನಡೆದ 191ನೇ ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಹಾಗೂ ದಂತ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಲಯನ್ ಸೇವಾ ಸಂಸ್ಥೆ ಕಳೆದ 41 ವರ್ಷಗಳಿಂದ ಸಾವಿರಾರು ಉಚಿತ ಶಿಬಿರಗಳನ್ನು ನಡೆಸಿದೆ. ಹತ್ತಾರು ಸಾವಿರ ದೃಷ್ಟಿ ಹೀನರಿಗೆ ಆಸರೆಯಾಗಿ ಉಚಿತ ಸೇವೆ ನೀಡುತ್ತಿದೆ ಸರ್ಕಾರದ ಪ್ರೋತ್ಸಾಹವಿಲ್ಲದೆ ಪ್ರಾಯೋಜಕರಿಂದ ಶಿಬಿರ ನಡೆಸುತ್ತಿದ್ದು, ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಯನ್ ಸಂಸ್ಥೆ ಖಜಾಂಚಿ ಸಿ.ಭಾಸ್ಕರ್ ಮಾತನಾಡಿ, ಪ್ರಾಯೋಜಕರು ಇಲ್ಲದೆ ಶಿಬಿರ ನಡೆಸಲು ಸಾಧ್ಯವಿಲ್ಲ, ರಂಗಣ್ಣ ಎಂಬ ದಾನಿಗಳು ನಾಲ್ಕು ವರ್ಷಗಳಿಂದ ವಾರ್ಷಿಕ ಶಿಬಿರಕ್ಕೆ ಸಹಾಯ ಮಾಡುತ್ತಿದ್ದಾರೆ. ತಪಾಸಣೆಗೆ ಬರುವವರಿಗೆ ಆಕಾಶ್ ಆಸ್ಪತ್ರೆಯಿಂದ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಲಯನ್ ಸಂಸ್ಥೆ ಇಬ್ಬರು ಟಿ.ಬಿ.ರೋಗಿಗಳಿಗೆ ಪೌಷ್ಟಿಕಾಂಶ ಕೊರತೆ ನೀಗಿಸಲು ಹೆಸರು ಕಾಳು, ಗೋದಿ, ಹುರುಳಿ ಮಿಶ್ರಣದ ಪೌಡರ್ ನೀಡಲಾಗುತ್ತಿದೆ ಎಂದರು.
ಕ್ಷಯ ರೋಗ ನಿಯಂತ್ರಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಡಿ.4ರಿಂದ 18ರ ವರೆಗೆ ತಾಲ್ಲೂಕಿನಲ್ಲಿ ಟಿ.ಬಿ. ರೋಗಿಗಳ ಮಾಹಿತಿ ಗಣತಿ ಕಾರ್ಯ ನಡೆಸಲಾಗುತ್ತಿದೆ.
ಎರಡು ವಾರಕ್ಕಿಂತ ಹೆಚ್ಚು ದಿನಗಳ ಕಾಲ ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರು ಮತ್ತು ದೇಹದ ತೂಕ ಕಡಿಮೆಯಾಗುತ್ತಿದ್ದರೆ ಟಿ.ಬಿ. ರೋಗದ ಲಕ್ಷಣಗಳಿರುವ ಸಾಧ್ಯತೆ ಇದೆ ಎಂದು ಅರ್ಥ ಎಂದರು. ಲಯನ್ ಅಧ್ಯಕ್ಷ ಪಿ.ಗಂಗಾಧರ್, ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ವಿ.ಗೋಪಾಲ್, ಲಯನ್ ಸದಸ್ಯರಾದ ಶ್ರೀರಾಮಯ್ಯ, ಚಂದ್ರಪ್ಪ, ಜಯಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.