ದೊಡ್ಡಬಳ್ಳಾಪುರ: ತಾಲ್ಲೂಕು ವೀರಶೈವ ಸಂಘ ಹಾಗೂ ತಾಲ್ಲೂಕು ವೀರಶೈವ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರಿಗೆ ಅವರ ನಿವಾಸದಲ್ಲಿ ಭಾನುವಾರ ‘ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲ್ಲೂಕು ವೀರಶೈವ ಸಂಘ ಪ್ರಧಾನ ಕಾರ್ಯದರ್ಶಿ ಪುಟ್ಟಬಸವರಾಜು ಮಾತನಾಡಿ, ‘ತಾಲ್ಲೂಕು ಬೋರ್ಡ್ನಿಂದ ರಾಜಕೀಯ ಬದುಕನ್ನು ಆರಂಭಿಸಿದ ಜಾಲಪ್ಪ ಅವರು ರಾಜ್ಯದ ಸಹಕಾರ ಸಚಿವ, ಕಂದಾಯ ಸಚಿವ, ಗೃಹ ಸಚಿವ ಹಾಗೂ ಕೇಂದ್ರದಲ್ಲಿ ಜವಳಿ ಸಚಿವರಾಗಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ’ ಎಂದರು.
ತಮ್ಮ ದೂರದೃಷ್ಟಿಯ ಆಲೋಚನೆಯಿಂದ ರೂಪುಗೊಂಡ ಮಹತ್ವಾಕಾಂಕ್ಷಿ ಜಕ್ಕಲಮಡಗು ಕುಡಿಯುವ ನೀರಿನ ಯೋಜನೆ ಶತ ಶತಮಾನಗಳ ಕಾಲ ಉಳಿಯುವಂತಾಗಿದ್ದು, ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಎರಡೂ ನಗರಗಳ ಜನರ ಕುಡಿಯುವ ನೀರಿನ ದಾಹವನ್ನು ನೀಗಿಸಿದೆ.
ಪರಿಸರ ಕಾಳಜಿಯಿಂದಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಅನೇಕ ಹಳ್ಳಿಗಳ ರಸ್ತೆ ಬದಿ, ಕೆರೆ ಅಂಗಳ, ಗುಂಡು ತೋಪುಗಳಲ್ಲಿ ಹಚ್ಚ ಹಸಿರಿನಿಂದ ಹೊಂಗೆ ಸಸಿಗಳು ಬೆಳೆದು ನಿಂತು ಪ್ರಾಣಿ, ಪಕ್ಷಿ ಸೇರಿದಂತೆ ಅನೇಕ ಜೀವಸಂಕುಲಕ್ಕೆ ಆಶ್ರಯವಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಾಲಪ್ಪ ಅವರು, ‘ಅಧಿಕಾರ ಇದ್ದಾಗ ಯಾವುದೇ ಜನಪ್ರತಿನಿಧಿ ಮಾಡಬೇಕಾದ ಜನಪರ ಕೆಲಸವನ್ನು ಮಾಡಿದ್ದೇನೆ. ಇದನ್ನು ಗುರುತಿಸಿ ಬಸವಶ್ರೀ ಪ್ರಶಸ್ತಿ ನೀಡಿರುವುದಕ್ಕೆ ನಾನು ಋಣಿಯಾಗಿದ್ದೇನೆ’ ಎಂದರು.
ತಾಲ್ಲೂಕು ವೀರಶೈವ ಸಂಘದ ಮುಖಂಡರಾದ ಕೊಡಿಗೇಹಳ್ಳಿ ಸಿದ್ದಲಿಂಗಪ್ಪ, ಬಿ.ಎಸ್.ಚಂದ್ರಶೇಕರ್, ಜೆ.ವೈ.ಮಲ್ಲಪ್ಪ, ಟಿ.ಎಸ್.ರುದ್ರಪ್ಪ, ಟಿ.ಲಿಂಗಪ್ಪ, ಬಿ.ವಿ.ಲೋಕೇಶ್, ವಿ.ಸಿ.ಜ್ಯೋತಿಕುಮಾರ್, ಸೋಮಣ್ಣ, ಮಂಜುನಾಥ್ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.