ADVERTISEMENT

ಮಕ್ಕಳಲ್ಲಿ ಸುಪ್ತಪ್ರತಿಭೆ: ಬೆನ್ನುತಟ್ಟಿ ಪ್ರೋತ್ಸಾಹಿಸಿ

ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:59 IST
Last Updated 29 ಆಗಸ್ಟ್ 2016, 11:59 IST

ದೇವನಹಳ್ಳಿ: ಪ್ರತಿಯೊಂದು ಮಕ್ಕಳಲ್ಲಿ ಸುಪ್ತಪ್ರತಿಭೆ ಇರುತ್ತದೆ, ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪರಶುರಾಮ್ ತಿಳಿಸಿದರು.

ಪಟ್ಟಣದ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಕುಂದಾಣ ಮತ್ತು ಕಸಬ ಹೋಬಳಿ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ 2016 .17ನೇ ಸಾಲಿನ ಪ್ರತಿಭಾಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಸಾಮರ್ಥ್ಯಕ್ಕಿಂತ ಮೀರಿ ಸಾಧನೆ ಮಾಡುವ ಅನೇಕ ಮಕ್ಕಳು ಇದ್ದಾರೆ ,ಪೋಷಕರು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಿಂದ ಹಿಂದೆ ಸರಿಯುವಂತೆ ತಾಕೀತು ಮಾಡಬಾರದು ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗುರುರಾಜ್ ಮಾತನಾಡಿ, ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ 36 ಸಾಂಸ್ಕೃತಿಕ ಚಟುವಟಿಕೆಗಳಿವೆ, ಗಾಯನ, ನೃತ್ಯ, ಸಂಗೀತ, ಕಂಠ ಪಾಠ, ಧಾರ್ಮಿಕ ಶ್ಲೋಕ ಪಠಣ, ಕೋಲಾಟ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ನೋಡಲ್‌ ಅಧಿಕಾರಿ ಬಿ.ಎನ್‌.ಕೃಷ್ಣಪ್ಪ ನೂರಾರು ಮಕ್ಕಳು ಹತ್ತಾರು ವೇದಿಕೆಯಲ್ಲಿ ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸುವುದರಿಂದ ಇದೊಂದು ಸಂಭ್ರಮದ ಸಾಂಸ್ಕೃತಿಕ ಹಬ್ಬವಾಗಲಿದೆ ಎಂದರು. ಶಿಕ್ಷಕ ಶರಣಯ್ಯ ಹಿರೇಮಠ್‌, ಜಗನ್ನಾಥ್‌, ವೈ.ವಿ.ಚಂದ್ರಶೇಖರ್‌, ಹನುಮಂತಪ್ಪ, ಕೃಷ್ಣಮೂರ್ತಿ, ಬಿಆರ್‌ಪಿ ಆದರ್ಶ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.