ದೇವನಹಳ್ಳಿ: ಮಾಹಿತಿ ಹಕ್ಕು ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಎರಡು ವರ್ಷ ಕಳೆದರೂ ಮಾಹಿತಿ ನೀಡದೆ ತಾಲ್ಲೂಕು ಪಂಚಾಯಿತಿ ನಿಯಮ ಉಲ್ಲಂಘಿಸಿದೆ ಎಂದು ತಾಯಪ್ಪ ದೂರಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ದಾಖಲೆ ನೀಡಿ ಮಾತನಾಡಿ, ‘ಬಿದಲೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದ ಜನತಾ ಕಾಲೊನಿ, ಹಳೆ ಕುರುಬರಕುಂಟೆ, ಹೊಸ ಕುರುಬರ ಕುಂಟೆ, ಲಾಲಗೊಂಡನಹಳ್ಳಿ ಗ್ರಾಮಗಳಲ್ಲಿ 2010ರಿಂದ 2015ರ ವರೆಗೆ ನಡೆದಿರುವ ಎಲ್ಲಾ ಅನುದಾನದ ಕಾಮಗಾರಿ ವಿವರ ಕೇಳಲಾಗಿತ್ತು. ಕಾಮಗಾರಿ ಅಂದಾಜು ವೆಚ್ಚ ಹಾಗೂ ಬಿಡುಗಡೆಯಾಗಿರುವ ಬಿಲ್ ಮೊತ್ತದ ಮಾಹಿತಿ ನೀಡುವಂತೆ 2015ರ ಸೆಪ್ಟೆಂಬರ್ 21ರಂದು ಅರ್ಜಿ ನೀಡಿ ಕೋರಲಾಗಿತ್ತು ಎಂದರು.
ತಾಲ್ಲೂಕು ಪಂಚಾಯಿತಿ, ಆವತಿ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಕೇಳಿದರೂ ಸಿಗುತ್ತಿಲ್ಲ ಎಂದು ದೂರಿದರು.
ಮುಖಂಡ ಗೋಪಾಲಕೃಷ್ಣ ಮಾತನಾಡಿ, ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಬ್ಬರಗುಂಟೆ ಆಂಜಿನಪ್ಪ ಮನೆಯಿಂದ ನಾರಾಯಣಸ್ವಾಮಿ ಮನೆವರೆಗೆ ಪೈಪ್ ಲೈನ್ ಕಾಮಗಾರಿ ನಡೆದಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ 2017ರ ಜೂನ್ 12ರಂದು ₹32,491 ಬಿಲ್ ಮಾಡಿದ್ದಾರೆ.
ದರೆ, ಕಾಮಾಗಾರಿಯೇ ಆಗಿಲ್ಲ. ಅದೇ ಗ್ರಾಮದ ಸುಬ್ರಮಣಿ ಖಾಲಿ ನಿವೇಶನದಿಂದ ಮುನಿಶಾಮಪ್ಪ ಮನೆವರೆಗೆ ಬಾಕ್ಸ್ ಚರಂಡಿ ಕಾಮಗಾರಿ ಎಂದು ಅಂದಾಜು ಪಟ್ಟಿ ಮಾಡಿ ಬಿಲ್ ಸೃಷ್ಟಿಸಿ ಅದೇ ದಿನಾಂಕದಂದು ₹22,645 ಹಣ ಪಂಚಾಯಿತಿಯಿಂದ ಪಡೆಯಲಾಗಿದೆ ಎಂದು ದೂರಿದರು.
ಆವತಿ ಪಂಚಾಯಿತಿಯಲ್ಲಿ ನಡೆದಿರುವ ಪ್ರತಿಯೊಂದು ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಆ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.