ದೇವನಹಳ್ಳಿ: ‘ಸತತ ಏಳು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಬಯಲು ಸೀಮೆ ಪ್ರದೇಶದಲ್ಲಿ ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ನಿರೀಕ್ಷಿಸಿದ್ದ ಸಾಲಮನ್ನಾ ಮಾಡಲಿಲ್ಲ, ರೈತರಾದ ನಾವೇ ಮಾಡಿಕೊಳ್ಳಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಪಂಚಾಯಿತಿ ಘಟಕ ಮತ್ತು ಬಯಲು ಸೀಮೆ ಜಿಲ್ಲೆ ವ್ಯಾಪ್ತಿಯ ರೈತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಬಜೆಟ್ನಲ್ಲಿ ರೈತರಿಗೆ ಎಂದು ಘೋಷಣೆ ಮಾಡಿರುವುದು ಕೃಷಿಗೆ ₹ 5080 ಕೋಟಿ, ತೋಟಗಾರಿಕೆಗೆ ₹ 1091 ಕೋಟಿ, ಪಶು ಸಂಗೋಪನೆಗೆ ₹ 2245 ಕೋಟಿ, ₹ ಮತ್ತು ರೇಷ್ಮೆಗೆ 429 ಕೋಟಿ ಇದೆ.
ಈ ಘೋಷಣೆಗಳು ರೈತರಿಗೂ ರೈತರ ಜೀವನಕ್ಕೂ ಸಂಬಂಧವಿಲ್ಲದವುಗಳು. ಕೃಷಿ ಉತ್ಪಾದನೆ ಹೆಚ್ಚು ಮಾಡಲಿಕ್ಕೆ ಆಹಾರ ಅಭದ್ರತೆ ನಿವಾರಣೆಯಾಗಬಾರದು ಎಂಬ ಉದ್ದೇಶವಿದ್ದರೂ ರೈತರಿಗೆ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.
ಸರ್ಕಾರ 7ನೇ ವೇತನ ಆಯೋಗ ರಚನೆಗೆ ಮುಂದಾಗಿದೆ ಇದು ಕಾರ್ಯಸಾಧ್ಯವಾದರೆ ಒಂದು ವರ್ಷಕ್ಕೆ ₹ 8000 ರಿಂದ ₹ 8500 ಕೋಟಿ ಹೆಚ್ಚುವರಿ ವೇತನ ಸರ್ಕಾರ ನೀಡಬೇಕು, ಆದರೆ ಇದನ್ನೇ ರೈತರಿಗೆ ನೀಡಿದರೆ ಮಾತ್ರ ಕಷ್ಟವಾಗುತ್ತದೆ ಎಂದು ಟೀಕಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ರೈತ ಸಂಘ ಅಧ್ಯಕ್ಷ ಭೈರೇಗೌಡ ಮಾತನಾಡಿ, ಬಯಲು ಸೀಮೆ ಜಿಲ್ಲೆಯಲ್ಲಿ ಬರಗಾಲವೆಂಬುದು ಒಂದೇ ನಾಣ್ಯದ ಒಂದೇ ಮುಖ ಇದ್ದಂತೆ, ಆಡಳಿತಕ್ಕೆ ಬಂದ ಎಲ್ಲ ಸರ್ಕಾರಗಳು ರೈತ ಮಹಿಳೆಯರ ಮಾಂಗಲ್ಯ ಭಾಗ್ಯ ಕಿತ್ತುಕೊಂಡಿವೆ. ಕಳೆದ 60 ವರ್ಷಗಳಿಂದ ಬಯಲು ಸೀಮೆಗೆ ನೀಡಿರುವ ಕೊಡುಗೆ ಏನು ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕು ಎಂದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಶಾಶ್ವತ ನೀರಿನ ಯೋಜನೆಯ ಹೋರಾಟ ವಿಫಲವಾಗಲು ರೈತರಲ್ಲಿರುವ ಗೊಂದಲ ಕಾರಣ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಕೆಂಚಪ್ಪಗೌಡ, ಗ್ರಾಮ ಪಂಚಾಯಿಇ ಅಧ್ಯಕ್ಷ ದೇವರಾಜ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನೇಗೌಡ ಮಾತನಾಡಿದರು. ಹಸಿರು ಸೇನೆ ರಾಜ್ಯ ಸಂಚಾಲಕ ಕೆ.ಎಸ್.ಹರೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಮುತ್ತೇಗೌಡ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಾಲ್ಲೂಕು ರೈತ ಸಂಘ ಅಧ್ಯಕ್ಷ ಗಾರೆ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.
*
ಅಂತರ್ಜಲ ಭೂಗರ್ಭದಲ್ಲಿ ಹುದುಗಿದೆ, ಶಾಶ್ವತ ಪರಿಹಾರ ಅನಿವಾರ್ಯವಾಗಿದೆ, ರೈತರು ಆಡಳಿತ ನಡೆಸುವ ಸರ್ಕಾರ ಬರಬೇಕಾಗಿದೆ.
-ಕಾರಹಳ್ಳಿ ಶ್ರೀನಿವಾಸ್, ತಾಪಂ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.