ADVERTISEMENT

ಅರಣ್ಯ ಪ್ರದೇಶದಲ್ಲಿ ಸಸಿ ಪ್ರಸರಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 5:20 IST
Last Updated 2 ಜುಲೈ 2017, 5:20 IST

ಚಿಕ್ಕೋಡಿ: ‘ಪರಿಸರ ಸಂರಕ್ಷಣೆಯಲ್ಲಿ ಬೀಜದುಂಡೆ ತಯಾರಿಕೆ ಹಾಗೂ ಪ್ರಸ ರಣ ಒಂದು ಕ್ರಾಂತಿಕಾರಿ ಹೆಜ್ಜೆ ಆಗಿದ್ದು, ಇದರಿಂದ ಸಸ್ಯ ಸಂಕುಲ ವೃದ್ಧಿಯಾಗು ತ್ತದೆ. ಪ್ರತಿಯೊಂದು ಶಾಲಾ ಕಾಲೇಜು ಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ’ ಎಂದು ತಾಲ್ಲೂಕಿನ ಕೋಥಳಿ–ಕುಪ್ಪಾನವಾಡಿ ಜವಾಹರ ನವೋದಯ ವಿದ್ಯಾಲಯದ ಉಪ ಪ್ರಾಚಾರ್ಯೆ ವಿ.ಶಾಂತಿ ಹೇಳಿದರು.

ಜವಾಹರ ನವೋದಯ ವಿದ್ಯಾಲಯ ಹಾಗೂ ಚಿಕ್ಕೋಡಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆಗಳು ಜಂಟಿಯಾಗಿ ತಯಾರಿಸಿದ ಸುಮಾರು 50 ಸಾವಿರ ಬೀಜದುಂಡೆಗಳನ್ನು ತಾಲ್ಲೂಕಿನ ನಾಯಿಂಗ್ಲಜ ಅರಣ್ಯ ಪ್ರದೇಶದಲ್ಲಿ ಪ್ರಸರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಣ್ಣ ಮಣ್ಣಿನ ಉಂಡೆಯನ್ನು ತಯಾರಿಸಿ, ಅದರಲ್ಲಿ ಬೀಜವನ್ನು ಇಟ್ಟು, ಬೀಜ ಸಹಿತ ಮಣ್ಣಿನ ಉಂಡೆಗಳನ್ನು ನೆಲದಲ್ಲಿ ಊರುವುದರಿಂದ ಬೀಜಗಳ ಮೊಳಕೆ ಒಡೆದು ಸಸಿಗಳಾಗುತ್ತವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಮಾಡಿದ ಈ ಯೋಜನೆ ಫಲಕಾರಿಯಾಗಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯೆ ಶೈಲಜಾ ಕಾಗೆ ಮಾತನಾಡಿ ಅರಣ್ಯ ಸಂಪತ್ತು ಕ್ಷೀಣಿಸಿ ಸರಿಯಾಗಿ ಮಳೆ ಬೀಳದೆ ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಮಕ್ಕಳು ತಯಾರಿಸಿರುವ ಬೀಜದುಂಡೆಗಳಿಂದ ನಮ್ಮ ಅರಣ್ಯ ಸಂಪತ್ತು ಹೆಚ್ಚಾಗುವುದರಲ್ಲಿ ಸಂಶಯ ಇಲ್ಲ ಎಂದು ಹೇಳಿದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೀವ ಕಾಂಬಳೆ, ‘ಅರಣ್ಯ ಸಂಪತ್ತು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿ ರುವುದರಿಂದ ಪರಿಸರ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಭೂಮಿಯ ತಾಪಮಾನ ಹಾಗೂ ವಾಯು ಮಾಲಿನ್ಯ ಹೆಚ್ಚಾಗಿ ಹಲವಾರು ಪ್ರಾಕೃತಿಕ ಅವಘಡಗಳು ನಡೆಯುತ್ತಿವೆ.

ಪರಿಸರ ನಾಶದಿಂದಾಗಿ ನಮ್ಮ ಮುಂದಿನ ಪೀಳಿಗೆ ಸ್ವಚ್ಛವಾದ ಪರಿಸರದಲ್ಲಿ ಬದುಕುವುದು ಅಸಾಧ್ಯವಾಗುತ್ತಿದೆ. ಆದ್ದರಿಂದ ನಾವೆಲ್ಲ ಸಾಕಷ್ಟು ಮರ ಗಿಡಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು. ಜವಾಹರ ನವೋದಯ ವಿದ್ಯಾರ್ಥಿಗಳು ನಾಯಿಂಗ್ಲಜ ಅರಣ್ಯ ಪ್ರದೇಶದಲ್ಲಿ ಬೀಜದುಂಡೆಗಳ ಪ್ರಸರಣ ಮಾಡಿದರು.

ಪಟ್ಟಣಕುಡಿ ಗ್ರಾ.ಪ ಅಧ್ಯಕ್ಷ ವಿದ್ಯಾಧರ ಕಾಗೆ, ಕೋಥಳಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಕುಂಬಾರ, ಬೀಜದುಂಡೆ ತಯಾರಿಕೆ ಸಮನ್ವಯಾಧಿಕಾರಿ ಬಾಬುರಾವ್ ಎಸ್‌.ಜಿ., ವಿದ್ಯಾಲಯದ ಸಿಬ್ಬಂದಿ ಎ.ಬಿ. ಪಾಟೀಲ, ಅರಣ್ಯಾಧಿಕಾರಿ ಬಿ.ಎ. ದೇವರಕ್ಕಿ, ಆರ್‌.ವಿ.ಮುರಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.