ಚಿಕ್ಕೋಡಿ: ತಾಲ್ಲೂಕಿನ ಹೊಳೆಸಾಲಿನಲ್ಲಿ ಕಳೆದ ನಾಲ್ಕಾರು ದಿನಗಳಿಂದ ಹಿರಿ ಹೊಳೆ ಕೃಷ್ಣೆ ಮತ್ತು ಉಪನದಿ ಮೈದುಂಬಿಕೊಂಡು ಹರಿಯುತ್ತಾ ನೆರೆ ಭೀತಿ ಸೃಷ್ಟಿಸಿದ್ದರೆ, ಮಡ್ಡಿಗಾಡು ಪ್ರದೇಶದ ಗ್ರಾಮಗಳ ಸಾರ್ವಜನಿಕರಿಗೆ ತಾಲ್ಲೂಕು ಆಡಳಿತ ಟ್ಯಾಂಕರ್ ಮೂಲಕ ಕುಡಿವ ನೀರು ಸರಬರಾಜು ಮಾಡ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಹೌದು, ಪಂಚನದಿಗಳು ಪ್ರವಹಿಸುವ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಪ್ರಕೃತಿ ವಿಸ್ಮಯ ತೋರಿದೆ. ತಾಲ್ಲೂಕು ಹಾಗೂ ಮಹಾರಾಷ್ಟ್ರದ ನದಿ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಕೃಷ್ಣಾ ಮತ್ತು ಉಪನದಿ ಮೈದುಂಬಿಕೊಂಡು ಹರಿಯುತ್ತಿದೆ. ನದಿ ತೀರಗಳಲ್ಲಿರುವ ತಾಲ್ಲೂಕಿನ 36 ಗ್ರಾಮಗಳಲ್ಲಿ ನೆರೆ ಭೀತಿ ಉಂಟಾಗಿದೆ.
ಸಂಭವನೀಯ ನೆರೆ ಹಾವಳಿ ಸಮರ್ಥವಾಗಿ ಎದುರಿಸಲು ತಾಲ್ಲೂಕು ಆಡಳಿತ ಕಣ್ಗಾವಲು ಕಾಯುವ ಅನಿವಾ ರ್ಯತೆ ಒಂದೆಡೆಯಾದರೆ, ತಾಲ್ಲೂಕಿನ ಇನ್ನೊಂದು ಭಾಗದಲ್ಲಿ ಮಳೆಗಾಲ ಆರಂಭಗೊಂಡು ಎರಡು ತಿಂಗಳು ಸರಿ ಯುತ್ತಾ ಬಂದರೂ ನಿರೀಕ್ಷಿತ ಪ್ರಮಾಣ ದಲ್ಲಿ ಮಳೆ ಸುರಿಯದೇ ಅಂತರ್ಜಲ ಮಟ್ಟ ಕುಸಿದು ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಅನಿವಾರ್ಯ ಪರಿಸ್ಥಿತಿ ಇದೆ.
ತಾಲ್ಲೂಕಿನ ಚಿಕ್ಕೋಡಿ ರಸ್ತೆ, ಬೆಳಕೂಡ, ಕರಗಾಂವ, ಬಂಬಲವಾಡ, ಕುಂಗಟೋಳಿ, ಬೆಣ್ಣಿಹಳ್ಳಿ, ಹಿರೇಕೋಡಿ, ಇಟನಾಳ, ಮಮದಾಪುರ, ಜೋಡ ಕುರಳಿ, ಉಮರಾಣಿ, ಇಟ್ನಾಳ ಹಾಗೂ ಬೆಳಗಲಿ ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಬದಿ ನಿಂತಿರುವ ಟ್ಯಾಂಕರ್ನಿಂದ ಕೊಡ ನೀರು ಪಡೆಯಲು ತಳ್ಳಾಟ ನಡೆಸಿರುವ ಜನರನ್ನು ಕಂಡರೆ, ಹತ್ತಾರು ಕಿ.ಮೀ. ಕ್ರಮಿಸಿ ಹೊಳೆಸಾಲಿನ ಗ್ರಾಮಗಳನ್ನು ಪ್ರವೇಶಿಸುತ್ತಿದ್ದಂತೆಯೇ ನದಿಗಳಲ್ಲಿ ಲಕ್ಷಾಂತರ ಕ್ಯುಸೆಕ್ ನೀರು ಹರಿದು ಹೋಗುತ್ತಿರುವ ದೃಶ್ಯ ಕಾಣುತ್ತದೆ.
ನದಿದಡಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಗಳು ಮುಳುಗಡೆ ಯಾಗುತ್ತಿವೆ. ಹುಲ್ಲಿನ ಗದ್ದೆಗಳು ಮುಳು ಗಡೆಯಾಗಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಪಕ್ಕದಲ್ಲೇ ಜಲರಾಶಿಯಿದ್ದರೂ ಶುದ್ಧವಾದ ಕುಡಿಯುವ ನೀರಿಗಾಗಿ ಜನ ಪರದಾಡಬೇಕಾದ ಅನಿವಾರ್ಯತೆ ಇದೆ.
ಇನ್ನೊಂದೆಡೆ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟೆಯನ್ನೇ ಕಟ್ಟಿಕೊಂಡಿ ರುವ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಮಡ್ಡಿಗಾಡು ಗ್ರಾಮಗಳಲ್ಲಿ ಮಳೆಗಾಲ ಆರಂಭ ಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ನಾಗರ ಮುನ್ನೋಳಿ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಇನ್ನೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಜೈನಾಪುರ ಹಾಗೂ ಇತರ 11 ಗ್ರಾಮಗಳಿಗೆ ಕುಡಿಯುವ ನೀರು ಸರಬ ರಾಜು ಮಾಡುವ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಯಿಂದಲೂ ಇನ್ನೂ ನಿಯಮಿತವಾಗಿ ನೀರು ಸರಬ ರಾಜು ಆಗುತ್ತಿಲ್ಲ. ಇದರಿಂದ ಈ ಗ್ರಾಮಗಳಲ್ಲೂ ಕುಡಿಯುವ ನೀರಿಗಾಗಿ ಜನ ಪರದಾಡಬೇಕಾಗಿದೆ.
‘ಚಿಕ್ಕೋಡಿ ತಾಲ್ಲೂಕಿನ ನಾಗರ ಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮು ಆರಂಭ ಗೊಂಡು ಎರಡು ತಿಂಗಳ ನಂತರ ಕಳೆದ 2–3 ದಿನಗಳಿಂದ ಮಳೆಯಾಗುತ್ತಿದೆ. ಅದೂ ಹಳ್ಳಕೊಳ್ಳ ತುಂಬಿ ಹರಿಯು ವಷ್ಟು ಅಲ್ಲ. ಆದರೆ, ಬಾವಿ, ಬೋರ ವೆಲ್ಗಳ ಅಂತರ್ಜಲಮಟ್ಟ ಹೆಚ್ಚಳವಾ ಗಿಲ್ಲ. ಈಗ ರೈತರು ಬಿತ್ತನೆಗೆ ಸಜ್ಜಾಗು ತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದೆ. ಈ ಭಾಗದ ಜನ–ಜಾನುವಾರುಗಳ ಸ್ಥಿತಿ ಗಂಭೀರವಾಗಲಿದೆ. ಟ್ಯಾಂಕರ್ ಮೂಲಕ ಕುಡಿ ಯುವ ನೀರಿನ ಸರಬರಾಜು ಆಗುತ್ತಿದೆ.’ ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ದಾನಪ್ಪ ಕೊಟಬಾಗಿ ಒತ್ತಾಯಿಸುತ್ತಾರೆ.
ತಾಲ್ಲೂಕಿನಲ್ಲಿ ಹರಿದು ಹೋಗುವ ಕೃಷ್ಣೆ ಮತ್ತು ಉಪನದಿಗಳು ಪಕ್ಕದ ಬೆಳೆಗಳಿಗೂ ದಾಳಿ ಇಟ್ಟಿರುವ ಹಿನ್ನೆಲೆ ಯಲ್ಲಿ ಕೃಷಿಕ ಕಂಗಾಲಾಗಿದ್ದರೆ, ಇನ್ನೊಂದೆಡೆ ಹದವಾದ ಮಳೆಯಾಗದೇ ಕುಡಿಯುವ ನೀರು, ಜಾನುವಾರುಗಳು ಮೇವಿನ ಚಿಂತೆ. ಇದೇ ಅಲ್ಲವೇ ಪ್ರಕೃತಿ ಮಾಯೆ..!
* *
ಮುಂಗಾರು ಆರಂಭದಲ್ಲಿಯೇ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದ್ದು, ಅದನ್ನು ಸಮರ್ಪಕವಾಗಿ ಸದ್ಬಳಕೆ ಮಾಡುಕೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ
ದಾನಪ್ಪ ಕೊಟಬಾಗಿ
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.