ADVERTISEMENT

ಪಟ್ಟಣ ಪಂಚಾಯ್ತಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:44 IST
Last Updated 24 ಮೇ 2017, 9:44 IST

ಚನ್ನಮ್ಮನ ಕಿತ್ತೂರು: ಪಟ್ಟಣದ ಸೋಮವಾರ ಪೇಟೆಯ ಮುಖ್ಯ ಬೀದಿಯಲ್ಲಿ ಕುಡಿಯುವ ನೀರಿನ ಹಾಹಾಕಾರವಿದ್ದು, 20 ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಕಾಣುವ ಭಾಗ್ಯ ನಮಗೆ ಒದಗಿ ಬಂದಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯ ಭೀಕರತೆ ಕುರಿತು ಪಟ್ಟಣ ಪಂಚಾಯ್ತಿಯ ಚುನಾಯಿತ ಪ್ರತಿನಿಧಿ­ಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ­ವಾಗಿಲ್ಲ. ಕೊಳವೆ ಬಾವಿ ತೋಡಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು ನೀರು ಬಿದ್ದರೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಸಿದ್ಧ ಉತ್ತರ ಹೇಳುತ್ತಾರೆ.

ಪಂಚಾಯ್ತಿಯ ವಾರ್ಡ್ ನಂ 2ರಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ನೀರಿನ ಬೇರೆ ಆಶ್ರಯ ಇಲ್ಲದಂತಾಗಿದೆ. ನೀರಿಗಾಗಿ ಕಾಯ್ದು ಕುಳಿತುಕೊಳ್ಳಬೇಕಾದೆ. ಕೆಲಸಕ್ಕೆ ಹೋಗುವುದೇ ಸಮಸ್ಯೆಯಾಗಿದೆ ಎಂದು ಬಿ.ಎಂ. ಶೆಡೆಗಾಳಿ ಅವರು ಹೇಳುತ್ತಾರೆ.

ADVERTISEMENT

ಸರಬರಾಜು ಸಮಸ್ಯೆ: ಕೆಲ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣವೂ ಕಡಿಮೆ­ಯಾಗಿದೆ. ಹೀಗಾಗಿ ಪಟ್ಟಣದ ವಿವಿಧೆಡೆ ಐದು ಹೊಸ ಕೊಳವೆ ಬಾವಿಗಳನ್ನು ತೋಡಿಸಲಾಗಿದೆ. ಗುರುವಾರ ಪೇಟೆಯ ಹಳೆಯ ಕೊಳವೆ ಬಾವಿಗಳಿಗೆ ಮುಖ್ಯ ನೀರಿನ ಟ್ಯಾಂಕಿಗೆ ಸಂಪರ್ಕ ಕಲ್ಪಿಸಲಾಗಿದೆ. ಇಷ್ಟಿದ್ದರೂ ಕೃತಕ ನೀರಿನ ಅಭಾವವನ್ನು ಪಂಚಾಯ್ತಿ ಆಡಳಿತ ಮಂಡಳಿ ಸೃಷ್ಟಿಸುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

ಕೆಲವು ಪ್ರದೇಶದಲ್ಲಿ ನೀರು ಪೋಲಾಗುತ್ತಿದೆ. ಇದನ್ನು ತಡೆದು ಬೇರೆ  ವಾರ್ಡ್‌ಗಳಿಗೆ ಪೂರೈಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಅವೈಜ್ಞಾನಿಕ ನೀರು ಸರಬರಾಜು ವ್ಯವಸ್ಥೆಗೆ ಬೇಸತ್ತಿರುವ ನಮಗೆ ಪ್ರತಿಭಟನೆಯೊಂದೇ ಉಳಿದಿರುವ ಏಕೈಕ ಮಾರ್ಗವಾಗಿದೆ. ನಮಗೆ ಟ್ಯಾಂಕರ್ ಮೂಲಕವಾದರೂ ನೀರು ಕೊಡಿ ಎಂದು ಅವರು ಆಗ್ರಹಿಸದರು. ಶರಣು ಈಟಿ, ಯು.ಬಿ. ಶೆಡೆಗಾಳಿ, ಅನ್ನಪೂರ್ಣ ಹಂಜಿ, ಎಸ್.ಐ. ಇಂಗಳೆ, ಎಸ್.ವಿ. ಜಂಗಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.