ADVERTISEMENT

ಬೀಡಿ ಗ್ರಾ.ಪಂ ಪಿಡಿಒ ಮೇಲೆ ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:15 IST
Last Updated 20 ಜನವರಿ 2017, 9:15 IST

ಖಾನಾಪುರ: ತಾಲ್ಲೂಕಿನ ಬೀಡಿ ಗ್ರಾಮ ಪಂಚಾಯ್ತಿಯ ಪಿಡಿಒ ಎಂ.ಎ ಇನಾಮದಾರ ಹಾಗೂ ಸಿಬ್ಬಂದಿ ಅಬ್ದುಲ್ ಶಬ್ಬೀರ್ ಫರಾಸ್ ಅವರ ಮೇಲೆ ಗ್ರಾಮದ ಎಂಟು ಜನರು ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಂದಗಡ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೀಡಿ ಗ್ರಾಮದ ಅಡಿ ಎಂಬಲ್ಲಿ ಬುಧವಾರ ಸ್ವಚ್ಛ ಭಾರತ ಯೋಜನೆಯಡಿ ಪ್ರಗತಿಯಲ್ಲಿರುವ ಶೌಚಾಲಯ ಕಾಮಗಾರಿ ಪರಿಶೀಲನೆಗೆ ತೆರಳಿದ್ದಾಗ ತಾವಿದ್ದ ಸ್ಥಳಕ್ಕೆ ಆಗಮಿಸಿದ ಬೀಡಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜ್ಞಾನೇಶ್ವರ ಪಾಳೇಕರ, ಗ್ರಾಮಸ್ಥರಾದ ಶಂಕರ ಹೊಸೆಟ್ಟಿ, ಆನಂದ ಜಕಾತಿ, ಕಿಶನ್ ಸಾವಂತ, ಮೋಹನ ಕೊಳಮುಸ್ಕರ್, ಶ್ರೀಕಾಂತ ಪತ್ರಿ ಮತ್ತು ಲೋನಿತ ಪಾಳೇಕರ,

ವಿಠ್ಠಕ ಯಳ್ಳೂರಕರ ಹಾಗೂ ಗ್ರಾಮದ ಹತ್ತಾರು ಯುವಕರು ತಮ್ಮ ಹಾಗೂ ಅಬ್ದುಲ್ ಶಬ್ಬೀರ್ ಫರಾಸ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡಚಣೆ ಉಂಟು ಮಾಡಿದ್ದಾರೆ ಮತ್ತು ತಮ್ಮ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಇನಾಮದಾರ ನಂದಗಡ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕರಿಸಿದ ನಂದಗಡ ಠಾಣೆಯ ಎ.ಎಸ್.ಐ ಎಂ.ಬಿ ಹೊಳೆಪ್ಪಗೋಳ ಬೀಡಿ ಗ್ರಾಮದ ಎಂಟು ಜನರ ವಿರುದ್ಧ ಐಪಿಸಿ ಸೆಕ್ಷನ್ 1860 ಉಪ ನಿಯಮ 143, 147, 323, 307, 353, 504 ಮತ್ತು 506 ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.