ADVERTISEMENT

ಸಾಲಕ್ಕೆ ಸಾವೊಂದೇ ಪರಿಹಾರ ಅಲ್ಲ

ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಸಂಸದರ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 3:33 IST
Last Updated 12 ಜೂನ್ 2018, 3:33 IST

ಬೆಳಗಾವಿ: ತಾಲ್ಲೂಕಿನ ನಾಗೇರಹಾಳ, ವಿರಕಿನಕೊಪ್ಪ ಗ್ರಾಮಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಸಂಸದ ಸುರೇಶ ಅಂಗಡಿ ಸಾಂತ್ವನ ಹೇಳಿದರು.

ನಾಗೇರಹಾಳ ಗ್ರಾಮದ ಗಂಗಮ್ಮ ಸಿದ್ದಪ್ಪ ಚಿನ್ನನವರ (42) ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಹಾಗೂ ಕೈಗಡ ಪಡೆದಿದ್ದರು. ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದರು.

‘ಸಾಲಕ್ಕೆ ಸಾವೊಂದೇ ಪರಿಹಾರ ಅಲ್ಲ. ಭವಿಷ್ಯ ದೊಡ್ಡದಾಗಿದೆ. ಧೈರ್ಯವಾಗಿ ಮುನ್ನುಗ್ಗಿದರೆ ಎಂಥ ಕಷ್ಟವನ್ನಾದರೂ ಜಯಿಸಲು ಸಾಧ್ಯ. ಯಾರೂ ಸಾವಿಗೆ ಶರಣಾಗಬಾರದು’ ಎಂದು ಹೇಳಿದರು.

ADVERTISEMENT

ವಿರಕಿನಕೊಪ್ಪ ಗ್ರಾಮದ ಚಿನ್ನಪ್ಪ ಗಂಗಪ್ಪ ಅಮರಾಪೂರ (61) ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಬಬ್ಬ ರೈತನ ಸಾವು ಒಂದು ಕುಟುಂಬದ ಮೇಟಿ ಕಳಚಿದಂತೆ’ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪರಿಹಾರ: ‘ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಸರ್ಕಾರದಿಂದ ₹ 5 ಲಕ್ಷ ಪರಿಹಾರ ನೀಡಲಾಗುವುದು. ಜನ ಸುರಕ್ಷಾ ಯೋಜನೆಯಡಿ ₹ 2 ಲಕ್ಷ ಹಾಗೂ ಮಾಸಿಕ ₹ 2000 ಪಿಂಚಣಿ, ಇತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ಸ್ಥಳಕ್ಕೆ ಬಂದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಪರಿಹಾರ ಸಿಗುವಂತೆವಂತೆ ಮಾಡಬೇಕು’ ಸೂಚಿಸಿದರು.

ತಹಸೀಲ್ದಾರ್‌ ಜಕ್ಕನಗೌಡರ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಸಹಾಯಕ ಕೃಷಿ ನಿರ್ದೇಶಕ ಜಿ.ಬಿ. ಕಲ್ಯಾಣಿ, ಕಂದಾಯ ನಿರೀಕ್ಷಕ ಶ್ರೀಕಾಂತ ಹೈಗರ, ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಮೋಹನ ಅಂಗಡಿ, ಬಿಜೆಪಿ ಮುಖಂಡರಾದ ರಾಜೇಶ ದನದಮನಿ, ಶಿವಾನಂದ ಗುಂಡುಗೋಳ, ಭವಾನಿ ಪಗಾದ, ಮಹಾದೇವಿ ರಾಯಣ್ಣವರ, ನಾಗಯ್ಯ ಹವಾಲ್ದಾರ, ಯಲ್ಲೇಶಿ ದೊಡವಾಡಿ, ಆನಂದ ತಳವಾರ, ಕಲ್ಲಪ್ಪ ಸಂಪಗಾಂವಿ, ಅಡಿವೆಪ್ಪ ಗಿರಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.