ADVERTISEMENT

ಅಡುಗೆಗೆ ಹಸಿ ಕಸವೇ ಇಂಧನ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:42 IST
Last Updated 22 ಜುಲೈ 2017, 19:42 IST
ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ರೀಡಾಪಟು ರೀತ್‌ ಅಬ್ರಾಹಂ (ಬಲತುದಿ), ಮಂಡಳಿಯ ಅಧ್ಯಕ್ಷ ಸೈಯದ್‌ ಔನ್‌ ಸಫಾವಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ಕ್ಯೂ.ಸೈಯದ್‌, ಮಿರ್ಜಾ ಮುಮ್ತಾಜ್‌ ಅಲಿ ಇದ್ದರು
ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ರೀಡಾಪಟು ರೀತ್‌ ಅಬ್ರಾಹಂ (ಬಲತುದಿ), ಮಂಡಳಿಯ ಅಧ್ಯಕ್ಷ ಸೈಯದ್‌ ಔನ್‌ ಸಫಾವಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ಕ್ಯೂ.ಸೈಯದ್‌, ಮಿರ್ಜಾ ಮುಮ್ತಾಜ್‌ ಅಲಿ ಇದ್ದರು   

ಬೆಂಗಳೂರು: ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಬಳಸಿ ಅಡುಗೆ ಮಾಡಲು ಸಾಧ್ಯವೇ? ಹೌದು ಎಂದು ನಿರೂಪಿಸಿದ್ದಾರೆ ನವೋದ್ಯಮಿ ಮೀರ್‌ ಅಮೀರ್‌ ಹೈದರ್‌.

ಹಸಿ ಕಸವನ್ನು ಮಿಥೇನ್‌ ಅನಿಲವಾಗಿ ಮಾರ್ಪಡಿಸಿ, ಅದರಿಂದ ಅಡುಗೆ ತಯಾರಿಸುವ ಶಾಖ ಉತ್ಪಾದಿಸುವ ಯೋಜನೆ ಹೊಂದಿರುವ ಅವರು ಈ ಬಗ್ಗೆ ವಿವರಿಸಿದರು.

ಇಮಾಮಿಯಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಐಸಿಸಿಐ)ಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ನವೋದ್ಯಮ  ಮೇಳ ಮತ್ತು ಸಂವಾದಕಾರ್ಯಕ್ರಮ’ ನವೋದ್ಯಮಿಗಳಿಗೆ ಯೋಜನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತು.

ADVERTISEMENT

‘ನನ್ನ ಈ ಶೋಧವನ್ನು ಸಣ್ಣ ಹೋಟೆಲ್‌ಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದರಿಂದ ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೆ, ಅಡುಗೆ ಅನಿಲದ ಖರ್ಚೂ ಉಳಿಯುತ್ತದೆ’ ಎಂದು ಹೈದರ್‌ ಅವರು ವಿವರಿಸಿದರು.

ಸೈಯದ್‌ ಮುಜಾಯಿದ್‌ ಹುಸೇನ್‌, ‘ತೀರ್ಥಯಾತ್ರೆ ಹೊರಡುವ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಜನರಿಗೆ ಬೇಕಾಗುವ ಮಾಹಿತಿ ನೀಡುವ ವೆಬ್‌ಸೈಟ್‌ ರೂಪಿಸುತ್ತಿದ್ದೇನೆ.  ಯಾತ್ರಿಗಳು ಟ್ರಾವೆಲ್‌ ಏಜೆಂಟ್‌ಗಳನಡುವೆ ಕೊಂಡಿಯಾಗಿ ಇದು ಕಾರ್ಯ ನಿರ್ವಹಿಸಲಿದೆ.  ಇದನ್ನೆ ಉದ್ಯಮವಾಗಿ ಬೆಳೆಸುವ ಇರಾದೆ ಇದೆ’ ಎಂದರು.

ಮಂಡಳಿಯ ಕಾರ್ಯಾಧ್ಯಕ್ಷ ಮೀರ್‌ ಮಮ್ತಾಜ್‌ ಅಲಿ, ‘ಯುವ ಜನರಿಗಾಗಿ ನವೋದ್ಯಮ ಪರಿಕಲ್ಪನೆಗಳ ಸ್ಪರ್ಧೆ ಏರ್ಪಡಿಸಿದ್ದೇವೆ. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದವರಿಗೆ ₹ 10 ಲಕ್ಷ, ಎರಡನೆ ಸ್ಥಾನ ಪಡೆದವರಿಗೆ ₹ 5 ಲಕ್ಷ ಹಾಗೂ ಮೂರನೆ ಸ್ಥಾನ ಗಳಿಸಿದವರಿಗೆ ₹ 2 ಲಕ್ಷ ಬಹುಮಾನ ನೀಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.