ADVERTISEMENT

ಆರ್ಥಿಕ ಸಮಾನತೆ ದೊಡ್ಡ ಸವಾಲು: ಎಂ.ಜೆ.ಅಕ್ಬರ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2015, 20:00 IST
Last Updated 6 ಡಿಸೆಂಬರ್ 2015, 20:00 IST

ಬೆಂಗಳೂರು: ‘ಆರ್ಥಿಕ ಸಮಾನತೆ ಸಾಧಿಸುವುದು ದೇಶದ ಮುಂದಿರುವ ಬಹುದೊಡ್ಡ ಸವಾಲು’ ಎಂದು ಪತ್ರಕರ್ತರೂ ಆಗಿರುವ ರಾಜ್ಯಸಭಾ ಸದಸ್ಯ ಎಂ.ಜೆ. ಅಕ್ಬರ್‌ ತಿಳಿಸಿದರು.

‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಆಧುನಿಕತೆಗೆ ಇರುವ ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಈಗಲೂ ಸುಮಾರು 5 ಕೋಟಿಗೂ ಹೆಚ್ಚು ಜನರ ತಲೆ ಮೇಲೆ ಸೂರಿಲ್ಲ. ಹಾಗಾಗಿ ಆರ್ಥಿಕ ಸಮಾನತೆಯ ಗುರಿ ಸಾಧಿಸುವುದು ಅಷ್ಟು ಸುಲಭವಲ್ಲ. ಆದರೂ ಇದರ ಬಗ್ಗೆ ಆಶಾವಾದಿಯಾಗಿದ್ದೇನೆ’ ಎಂದರು.

‘ಆರ್ಥಿಕ ಸಮಾನತೆಯ ಜೊತೆಗೇ ಸ್ವಾತಂತ್ರ್ಯ, ಸಮಾನತೆಯಲ್ಲಿ ನಂಬಿಕೆ ಮತ್ತು ಲಿಂಗ ಸಮಾನತೆ ಇವು ಆಧುನಿಕತೆಗೆ ಅಗತ್ಯವಾಗಿ ಬೇಕಾಗಿರುವ ಪ್ರಮುಖ ಅಂಶಗಳು’ ಎಂದೂ ಹೇಳಿದರು.

‘ವೈಯಕ್ತಿಕ ಮತ್ತು ಸಾಮೂಹಿಕ ಸ್ವಾತಂತ್ರ್ಯ ಬಹುಮುಖ್ಯವಾದ ಸಂಗತಿಗಳು. ಅವುಗಳು ಇಲ್ಲದೇ ಹೋದರೆ ಆಧುನಿಕತೆಗೆ ಯಾವುದೇ ಅರ್ಥವಿಲ್ಲ’ ಎಂದರು.

‘ಚೀನಾ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಯಶಸ್ಸು ಕಂಡಿರಬಹುದು. ಆದರೆ ಅಲ್ಲಿ ಆಧುನಿಕತೆಯೇ ಇಲ್ಲ. ಕಾರಣ ಸಮಾನತೆಯಲ್ಲಿ ಅವರಿಗೆ ನಂಬಿಕೆ ಇಲ್ಲದಿರುವುದು’ ಎಂದು ಹೇಳಿದರು.

‘ಲಿಂಗ ಸಮಾನತೆಯೂ ಅಷ್ಟೇ ಮುಖ್ಯವಾದುದು. ಲಿಂಗ ಸಮಾನತೆಯಿಲ್ಲದ ರಾಷ್ಟ್ರದಲ್ಲಿ ಆಧುನಿಕತೆ ಕಾಣಲು ಸಾಧ್ಯವಿಲ್ಲ. ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಲಿಂಗ ಸಮಾನತೆಯೇ ಇಲ್ಲದಿರುವುದನ್ನು ನೋಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.