ADVERTISEMENT

‘ಕಲಾವಿದರ ಸ್ಮರಣೆ ಅಕಾಡೆಮಿಗೆ ಮಾತ್ರ ಸೀಮಿತ ಆಗದಿರಲಿ’

ಎಸ್.ಎಂ.ಪಂಡಿತ್, ಬಿ.ವಿ.ಕೆ. ಶಾಸ್ತ್ರಿ ಜನ್ಮಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 20:08 IST
Last Updated 20 ಜುಲೈ 2017, 20:08 IST
‘ಎಸ್‌.ಎಂ. ಪಂಡಿತ್‌’ ಮತ್ತು ‘ಬಿ.ವಿ.ಕೆ. ಶಾಸ್ತ್ರಿ’ ಅವರ ಭಾವಚಿತ್ರಕ್ಕೆ ವಿಮಲಾ ರಂಗಾಚಾರ್‌, ಜೆ.ಎಸ್‌. ಖಂಡೇರಾವ್‌, ಎಂ.ಎಸ್‌. ಮೂರ್ತಿ ಅವರು ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
‘ಎಸ್‌.ಎಂ. ಪಂಡಿತ್‌’ ಮತ್ತು ‘ಬಿ.ವಿ.ಕೆ. ಶಾಸ್ತ್ರಿ’ ಅವರ ಭಾವಚಿತ್ರಕ್ಕೆ ವಿಮಲಾ ರಂಗಾಚಾರ್‌, ಜೆ.ಎಸ್‌. ಖಂಡೇರಾವ್‌, ಎಂ.ಎಸ್‌. ಮೂರ್ತಿ ಅವರು ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಲೆಗಾಗಿ ದುಡಿದ ಮಹನೀಯರ ಕಾರ್ಯಕ್ರಮಗಳು  ಅಕಾಡೆಮಿಗಳಿಗೆ ಸೀಮಿತವಾಗದೆ, ಶಾಲಾ, ಕಾಲೇಜುಗಳಿಗೆ ತಲುಪಬೇಕು’ ಎಂದು ಸಂಸ್ಕೃತಿ ಚಿಂತಕಿ ವಿಮಲಾ ರಂಗಾಚಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ಕಲಾವಿದ ‘ಎಸ್.ಎಂ.ಪಂಡಿತ್’ ಹಾಗೂ ಕಲಾವಿಮರ್ಶಕ ‘ಬಿ.ವಿ.ಕೆ. ಶಾಸ್ತ್ರಿ’ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಾವಿದರನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಂಡರೆ, ಮಕ್ಕಳಿಗೆ ಕಲಾವಿದರ ಪರಿಚಯ ಆಗುತ್ತದೆ, ಪ್ರೇರಣೆಯೂ ಸಿಗುತ್ತದೆ’ ಎಂದು ಹೇಳಿದರು.

ADVERTISEMENT

ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್, ‘ಪಂಡಿತ್ ಅವರು ರವಿವರ್ಮನ ಕಲಾಕೃತಿಗಳಿಂದ ಪ್ರೇರಿತರಾಗಿ ಕಲಾ ಪ್ರಪಂಚಕ್ಕೆ ಬಂದರು. ನಂತರ ಅವರನ್ನು ರವಿವರ್ಮನ ಉತ್ತರಾಧಿಕಾರಿಯ ರೂಪದಲ್ಲಿ ಗುರುತಿಸಲಾಯಿತು. ಸಿನಿಮಾ ಪೋಸ್ಟರ್‌ಗಳನ್ನು ವರ್ಣಮಯವಾಗಿ ರೂಪಿಸಿಕೊಟ್ಟ ಅಪ್ರತಿಮ ಕಲಾವಿದ. ಲಂಡನ್‌ನಲ್ಲಿ ಪಂಡಿತರ ಕಲಾಕೃತಿಗಳು ಏಕವ್ಯಕ್ತಿ ಪ್ರದರ್ಶನ ಕಂಡಿವೆ’ ಎಂದು ನೆನಪಿಸಿಕೊಂಡರು.

ಡಾ. ಅನನ್ಯ ರಾಘವೇಂದ್ರ, ‘ಶಾಸ್ತ್ರಿ ಅವರು ಕರ್ನಾಟಕದ ಸಂಗೀತ ಮತ್ತು ನೃತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಲಾ ವಿಮರ್ಶೆಯಲ್ಲಿ ಅವರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡದೆ, ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು’ ಎಂದು ತಿಳಿಸಿದರು.

ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ, ‘ಈಗಿನ ಕಲಾವಿದರಲ್ಲಿ ತಾತ್ವಿಕ ಬದ್ಧತೆ ಕಳೆದುಹೋಗುತ್ತಿದೆ. ಕೇವಲ ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.