ಬೆಂಗಳೂರು: ಉಕ್ಕಿನ ಸೇತುವೆ ಕಾಂಗ್ರೆಸ್ ಮುಖಂಡರ ಪಾಲಿಗೆ ಚಿನ್ನದ ಸೇತುವೆಯಾಗಿದೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಟೀಕಿಸಿದರು.
ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ₹1,791 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಹಠಮಾರಿ ಧೋರಣೆ ತೋರಿಸುತ್ತಿದೆ. ಇದನ್ನು ನೋಡಿದರೆ ಈ ಯೋಜನೆ ಚಿನ್ನದಂತಹ ಲಾಭ ತರುವ ಯೋಜನೆಯಾಗಿದೆ ಎಂಬ ಅನುಮಾನ ಬರುತ್ತದೆ ಎಂದು ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ಉಕ್ಕಿನ ಸೇತುವೆಗೆ ಬಿಜೆಪಿ ಬೆಂಬಲ ನೀಡುವುದಿಲ್ಲ. ಯೋಜನೆ ವಿರೋಧಿಸುವವರ ಜತೆ ಸೇರಿ ಹೋರಾಟ ನಡೆಸಲಿದೆ ಎಂದರು.
ಆಕ್ರೋಶ ಏಕೆ?: ‘ಉಕ್ಕಿನ ಸೇತುವೆ ನಿರ್ಮಿಸಲೇಬೇಕೆಂದು ಪಣ ತೊಟ್ಟಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಬಿಜೆಪಿಯ ಎಸ್. ಸುರೇಶಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಎಲ್ಲರೂ ಈ ಯೋಜನೆ ವಿರೋಧಿಸಿದ್ದಾರೆ. ಆದರೆ, ಜಾರ್ಜ್ ಅವರಿಗೆ ನನ್ನ ಮೇಲೆ ಮಾತ್ರ ಏಕೆ ಇಷ್ಟೊಂದು ಸಿಟ್ಟು’ ಎಂದೂ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಇದೇ ಸರ್ಕಾರ ರಚಿಸಿರುವ ವಿಷನ್ ಗ್ರೂಪ್ ಸದಸ್ಯರಿಗೆ ಈ ಯೋಜನೆ ಬಗ್ಗೆ ತೀವ್ರ ಸಂಶಯವಿದೆ. ಈ ವರ್ಷ ಜೂನ್ ತಿಂಗಳಿನಲ್ಲಿ ₹1,350 ಕೋಟಿ ಇದ್ದ ಯೋಜನಾ ಮೊತ್ತ ಈಗ ₹ 1,791 ಕೋಟಿ ಹೆಚ್ಚಳವಾಗಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.