ADVERTISEMENT

ಕಾರಿಗೆ ಗುದ್ದಿದ ಸ್ಕೂಟರ್; ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:26 IST
Last Updated 21 ಮೇ 2018, 19:26 IST

ಬೆಂಗಳೂರು: ವಸಂತನಗರದ 1ನೇ ಮುಖ್ಯರಸ್ತೆಯಲ್ಲಿ ನಿಂತಿದ್ದ ಕಾರಿಗೆ ಸ್ಕೂಟರ್‌ ಗುದ್ದಿದ್ದರಿಂದ ಆಯಿಷಾ (26) ಎಂಬುವರು ಮೃತಪಟ್ಟಿದ್ದಾರೆ.

ಪ್ಯಾಲೆಸ್ ಗುಟ್ಟಹಳ್ಳಿ ನಿವಾಸಿಯಾದ ಅವರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಮ್ಜಾನ್‌ ಇದ್ದಿದ್ದರಿಂದ ಹಣ್ಣು ತರಲೆಂದು ಸೋಮವಾರ ನಸುಕಿನಲ್ಲಿ ಶಿವಾಜಿನಗರಕ್ಕೆ ಹೋಗಿದ್ದರು. ಅಲ್ಲಿಂದ ವಾಪಸ್‌ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

‘ಕೊಡವ ಸಮಾಜದ ಹಾಲ್ ಎದುರಿನ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಲಾಗಿತ್ತು. ಆಯಿಷಾ ಚಲಾಯಿಸುತ್ತಿದ್ದ ಸ್ಕೂಟರ್‌, ಆ ಕಾರಿಗೆ ಗುದ್ದಿತ್ತು. ಸ್ಕೂಟರ್‌ನಿಂದ ಬಿದ್ದ ಆಯಿಷಾರನ್ನು ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದರು’ ಎಂದು ಹೈಗ್ರೌಂಡ್ಸ್ ಸಂಚಾರ ಪೊಲೀಸರು ತಿಳಿಸಿದರು.

ADVERTISEMENT

‘ಆಯಿಷಾ ಅವರು ಹೆಲ್ಮೆಟ್‌ ಧರಿಸಿರಲಿಲ್ಲ. ಹೀಗಾಗಿ, ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರು ಯಾರದ್ದು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.