ADVERTISEMENT

ಕೃತಕ ಹೃದಯದ ಯುವಕನಿಗೆ ಹೃದಯ ಕಸಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:57 IST
Last Updated 21 ಫೆಬ್ರುವರಿ 2017, 19:57 IST

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯರು ಕೃತಕ ಹೃದಯವಿದ್ದ ಯುವಕನಿಗೆ ಹೃದಯ ಕಸಿ ಮಾಡಿದ್ದಾರೆ.

ಹೃದಯದಿಂದ ದೇಹಕ್ಕೆ ಹಾಗೂ ದೇಹದಿಂದ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಎರಡೂ ನಾಳಗಳು ಕಾರ್ಯ ಸ್ಥಗಿತಗೊಂಡು ಹೃದಯ ಬಡಿತ ಸ್ತಬ್ಧಗೊಂಡಿದ್ದ 20 ವರ್ಷದ ಯುವಕ ಕಳೆದ 10 ದಿನಗಳಿಂದ ಕೃತಕ ಹೃದಯದ ಮೂಲಕ ಬದುಕಿದ್ದಾನೆ.

ಕೃತಕ ಹೃದಯವನ್ನು ಜೋಡಿಸಿಕೊಂಡಿರುವ ಯುವಕನಿಗೆ ಮಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟ 28 ವರ್ಷದ ವ್ಯಕ್ತಿಯೊಬ್ಬರ ಜೀವಂತ ಹೃದಯವನ್ನು ವೈದ್ಯರು ಮಂಗಳವಾರ ಜೋಡಿಸಿದ್ದಾರೆ.

ADVERTISEMENT

ಮಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 7.30ಕ್ಕೆ ಹೊರಟ ಜೀವಂತ ಹೃದಯ ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 8.30ರ ಸುಮಾರಿಗೆ ತಲುಪಿದೆ. ಹೃದಯವನ್ನು ಸಾಗಿಸಲು ವಿಮಾನ ನಿಲ್ದಾಣದಿಂದ  ಎಂ.ಎಸ್. ರಾಮಯ್ಯ ಆಸ್ಪತ್ರೆ  ವರೆಗೆ ‘ಗ್ರೀನ್‌ ಕಾರಿಡಾರ್‌’ (ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆ) ನಿರ್ಮಿಸಲಾಗಿತ್ತು. 

ವೈದ್ಯರ ತಂಡ ತಡರಾತ್ರಿವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಜೀವಂತ ಹೃದಯವನ್ನು ಜೋಡಿಸಿದರು. ಹೃದಯ ಪಡೆದ ಯುವಕನನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯದ ಮೇಲೆ ವೈದ್ಯರು ನಿಗಾವಹಿಸಿದ್ದಾರೆ.

ರಾಮಯ್ಯ ನಾರಾಯಣ ಹೃದಯ ಕೇಂದ್ರದ ಹೃದಯ ತಜ್ಞ ವೈದ್ಯರಾದ ಡಾ.ಯು.ಎಂ.ನಾಗಮಲ್ಲೇಶ್, ಡಾ. ಜ್ಯುಲಿಯಸ್, ಡಾ. ರವಿಶಂಕರ್ ಶೆಟ್ಟಿ, ಡಾ.ರವಿನಾಯಕ್ ಮತ್ತು ಡಾ. ಶಿಲ್ಪಾ ಅವರ ವೈದ್ಯಕೀಯ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. ಹೃದಯ ಪಡೆದ ಯುವಕನ ಕುಟುಂಬದವರು ಜ.13 ರಂದು  ಅಂಗಾಂಗ ಕಸಿಯ ವಲಯ ಸಮನ್ವಯ ಸಮಿತಿಗೆ (ಜೆಡ್‌ಸಿಸಿಕೆ) ಅಂಗಾಂಗಕ್ಕಾಗಿ ನೋಂದಣಿ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.