ಬೆಂಗಳೂರು: ‘ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಆಕರಣೆ ಮೇಲೆ ಮಿತಿ ವಿಧಿಸಬೇಕು’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಿವಕುಮಾರ್ ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಣ ವ್ಯಾಪಾರವಾಗಿದ್ದು, ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಖಾಸಗಿ ಶಾಲೆಗಳ ಶಿಕ್ಷಣ ಗುಣಮಟ್ಟ ವೃದ್ಧಿಸಲು ಮತ್ತು ಶುಲ್ಕವನ್ನು ನಿಯಂತ್ರಿಸಲು ಮಂಡಳಿ ರಚಿಸಬೇಕು. ಸಂಗ್ರಹಿಸಿದ ಶುಲ್ಕದ ಬಳಕೆ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲೇ ಲೆಕ್ಕಪತ್ರ ತಪಾಸಣೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಪೋಷಕರ ದೂರು ಆಲಿಸಲು ಸಮರ್ಪಕ ಸಹಾಯವಾಣಿ ಆರಂಭಿಸಬೇಕು. ತಪ್ಪಿತಸ್ಥ ಶಾಲೆಗಳಿಗೆ ದಂಡ ವಿಧಿಸಬೇಕು’ ಎಂದರು.
‘ಖಾಸಗಿ ಶಾಲೆಗಳ ವಿರುದ್ಧದ ಹೋರಾಟಕ್ಕಾಗಿ ಪಕ್ಷದ ವತಿಯಿಂದ ಪೋಷಕರಿಗಾಗಿ 080–67331891 ಸಹಾಯವಾಣಿ ಆರಂಭಿಸಲಾಗಿದೆ. ಈ ನಂಬರ್ಗೆ ಮಿಸ್ಡ್ ಕಾಲ್ ನೀಡಿ ದೂರು ದಾಖಲಿಸಬಹುದು. ಜತೆಗೆ ಪೋಷಕರ ‘education@aapkarnataka.org ವೆಬ್ಸೈಟ್ನಲ್ಲೂ ದೂರು ದಾಖಲಿಸಬಹುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.