ADVERTISEMENT

ಗ್ರಾಮೀಣಾಭಿವೃದ್ಧಿ ತರಬೇತಿ ನಗರ ಆಡಳಿತದ ಕೆಲಸ

ಐಎಎಸ್‌ ಅಧಿಕಾರಿಗಳ ತರಬೇತಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:53 IST
Last Updated 16 ಮಾರ್ಚ್ 2017, 19:53 IST
ನರೇಶ್‌ ವಿ. ನರಸಿಂಹನ್‌ ಮಾತನಾಡಿದರು. (ಎಡದಿಂದ) ಶೈಲೇಶ್‌ ಪಾಠಕ್‌,  ಎಲ್.ಕೆ.ಅತೀಕ್‌, ಮಾರ್ಕ್‌ ಅಥೆರ್ಟನ್‌ ಇದ್ದಾರೆ. –ಪ್ರಜಾವಾಣಿ ಚಿತ್ರ
ನರೇಶ್‌ ವಿ. ನರಸಿಂಹನ್‌ ಮಾತನಾಡಿದರು. (ಎಡದಿಂದ) ಶೈಲೇಶ್‌ ಪಾಠಕ್‌, ಎಲ್.ಕೆ.ಅತೀಕ್‌, ಮಾರ್ಕ್‌ ಅಥೆರ್ಟನ್‌ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಐಎಎಸ್‌ ಅಧಿಕಾರಿಗಳಿಗೆ ತರಬೇತಿ ಸಂದರ್ಭದಲ್ಲಿ ಗ್ರಾಮೀಣ ಆಡಳಿತದ ಕುರಿತ ತರಬೇತಿ ನೀಡುತ್ತಾರೆ. ತದನಂತರ ನಗರ ಆಡಳಿತಕ್ಕೆ ಹಾಕುತ್ತಾರೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್‌ ಹೇಳಿದರು.

ಚಿವೆನಿಂಗ್‌ ಅಲ್ಯೂಮ್ನಿ ಇಂಡಿಯಾ (ಸಿಎಐ) ಸಮೂಹವು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಧಿಕಾರಿಗಳು ಮತ್ತು ರಾಜಕಾರಣಿಗಳು ಗ್ರಾಮೀಣಾಭಿವೃದ್ಧಿ ಚಿಂತನೆ ಮೈಗೂಡಿಸಿಕೊಂಡಿದ್ದಾರೆ. ಹಾಗಾಗಿ ನಗರಾಡಳಿತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇತ್ತಿಚೆಗೆ ನಗರಾಡಳಿತದ ಬಗ್ಗೆ ಇಬ್ಬರು ಕಲಿಯುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಅಸೋಸಿಯೇಷನ್‌ ಆಫ್‌ ಗ್ರೇಟರ್‌ ಮ್ಯಾಂಚೆಸ್ಟರ್‌ ಅಥಾರಿಟಿಸ್‌ನ ಪ್ರತಿನಿಧಿ ಮಾರ್ಕ್‌ ಅಥೆರ್ಟನ್‌ ಮಾತನಾಡಿ, ‘ಸಮಾಜದಲ್ಲಿ ಮೌಲ್ಯಗಳು ಬದಲಾದಂತೆ ದೃಷ್ಟಿಕೋನಗಳು ಬದಲಾಗುತ್ತಿವೆ. ಆಡಳಿತಕ್ಕೆ ಸಲಹೆಗಳನ್ನು ಜನರಿಂದ ಪಡೆದಾಗ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಜನರು ಆಡಳಿತದ ಸಹಭಾಗಿತ್ವದಿಂದ ಯಾಕೆ ವಿಮುಖರಾಗುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಬೇಕಿದೆ’ ಎಂದರು.

ನಗರಯೋಜನಾ ತಜ್ಞ ನರೇಶ್‌ ವಿ.ನರಸಿಂಹನ್‌ ಮಾತನಾಡಿ, ‘ಜನಪ್ರತಿನಿಧಿಗಳು ಈಡೇರಿಸಲು ಆಗದ ಭರವಸೆಗಳನ್ನು ನೀಡುತ್ತಾರೆ. ದೂರದೃಷ್ಟಿಯಿಲ್ಲದ ಯೋಜನೆ ರೂಪಿಸುತ್ತಾರೆ. ಇದರಿಂದ ಕ್ವಿಂಟಲ್‌ಗಟ್ಟಲೆ ಕಡತಗಳು ಸೃಷ್ಟಿಯಾಗುತ್ತವೆಯೇ ಹೊರತು ನಗರದ  ಅಭಿವೃದ್ಧಿ ಆಗುವುದಿಲ್ಲ’ ಎಂದರು.

ಸಿಎಐ ಸಮೂಹದ ಅಧ್ಯಕ್ಷ ಶೈಲೇಶ್ ಪಾಠಕ್‌ ಮಾತನಾಡಿ, ‘ರಾಜಕೀಯ ಆಡಳಿತ ಪ್ರಾಮಾಣಿಕವಾದಷ್ಟು ದೇಶದ ವರಮಾನ ಹೆಚ್ಚುತ್ತದೆ. ನಗರಗಳಲ್ಲಿ ಶಾಸಕರು ಮತ್ತು ಸಂಸದರು ಸ್ಥಳೀಯ ಜನಪ್ರತಿನಿಧಿಗಳ ಆಡಳಿತದಲ್ಲಿ ತಲೆದೂರಿಸುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಹೆಚ್ಚುತ್ತಿವೆ.

ಅವನ್ನು ಕೆಲವರು ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಪ್ರಶ್ನಿಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT