ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹಾಗೂ ಕರ್ನಾಟಕ ಮಾಹಿತಿ ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ನಡೆದ ಗ್ರಾಮೀಣ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಭಾಂದಾರದ ಲಾಲ್ ಬಹದ್ದೂರ್ ಶಾಸ್ತ್ರಿ ಜೂನಿಯರ್ ಕಾಲೇಜಿನ ರಿಶಿ ಪಂಕಜ್ ಸರ್ದಾ ಮತ್ತು ಪ್ರಥಮ್ ರಾಜೇಶ್ ಪಶಿನೆ ಮೊದಲ ಸ್ಥಾನ ಗಳಿಸಿದರು.
ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯಾ ಪ್ರೌಢಶಾಲೆಯ ಕ್ಲಿಪ್ಟನ್ ಡಿಸಿಲ್ವ ಮತ್ತು ವಿಶ್ವಾಸ್ ಅಡಿಗ ದ್ವಿತೀಯ ಸ್ಥಾನ ಗಳಿಸಿದರು. ವಿಜೇತ ತಂಡಕ್ಕೆ ₹1 ಲಕ್ಷ ಮೌಲ್ಯದ ಟಿಸಿಎಸ್ ವಿದ್ಯಾರ್ಥಿವೇತನ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ರನ್ನರ್ ಅಪ್ ತಂಡಕ್ಕೆ ₹50 ಸಾವಿರ ಬಹುಮಾನ ನೀಡಲಾಯಿತು. ಫೈನಲ್ನಲ್ಲಿ ಭಾಗವಹಿಸಿದ್ದ ಉಳಿದ ನಾಲ್ಕು ತಂಡಗಳಿಗೆ ತಲಾ ₹10 ಸಾವಿರ ಮೌಲ್ಯದ ವಿದ್ಯಾರ್ಥಿ ವೇತನ ನೀಡಲಾಯಿತು.
ಬೆಂಗಳೂರಿನ ಟಿಸಿಎಸ್ ಆಪರೇಷನ್ನ ಮುಖ್ಯಸ್ಥ ನಾಗರಾಜ ಇಜಾರಿ ಮಾತನಾಡಿ, ‘ದೇಶವು ಡಿಜಿಟಲ್ ಆರ್ಥಿಕತೆಯತ್ತ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ತಂತ್ರಜ್ಞಾನದಿಂದ ಕಡೆಯ ಹಂತದವರೆಗೂ ಸಾಕಷ್ಟು ಲಾಭಗಳು ಸಿಗುತ್ತಿವೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳು ಹೆಚ್ಚು ಕಲಿಯಲು ಮತ್ತು ಭವಿಷ್ಯದ ಡಿಜಿಟಲ್ ವ್ಯವಸ್ಥೆಗೆ ಸಜ್ಜಾಗುವಂತೆ ಮಾಡಲಿದೆ’ ಎಂದರು.
ಈ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುನೀತ್ ರಾಜಕುಮಾರ್ ವಿತರಿಸಿದರು. ಬೆಂಗಳೂರಿನ ಟಿಸಿಎಸ್ ಆಪರೇಷನ್ನ ಉಪಾಧ್ಯಕ್ಷ ಮತ್ತು ಮುಖ್ಯಸ್ಥರಾದ ನಾಗರಾಜ್ ಇಜಾರಿ ಮತ್ತು ಕರ್ನಾಟಕ ಸರ್ಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲಾ ಫೈನಲಿಸ್ಟ್ಗಳು ಪ್ರಶಸ್ತಿಗಳ ಜೊತೆಗೆ ಟಿಸಿಎಸ್ನಿಂದ 10,000 ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.