ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವಾರ ಕೆರೆ ಸಂಪೂರ್ಣ ಕಲುಷಿತಗೊಂಡು ಬಳಕೆಗೆ ಅಯೋಗ್ಯವಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ಸರ್ವೆ ನಂ 3ರಲ್ಲಿ ಈ ಕೆರೆ ಇದೆ. ಕೆರೆಯ ವಿಸ್ತೀರ್ಣ 72 ಎಕರೆ. ಜೊತೆಗೆ ಕೆರೆಗೆ ಈಗ ಒತ್ತುವರಿಯ ಭೀತಿ ಎದುರಾಗಿದೆ.
ಗ್ರಾಮ ಪ್ರಗತಿ ಹೊಂದಿ ಜನಸಂಖ್ಯೆ ಹೆಚ್ಚಾದಂತೆ ಕಲುಷಿತ ನೀರು ಕೆರೆ ಸೇರಲಾರಂಭಿಸಿದ ಬಳಿಕ ಕೆರೆಯ ಚಿತ್ರಣವೇ ಬದಲಾಗಿ ಹೋಗಿದೆ. ಆಸುಪಾಸಿನ ಅಪಾರ್ಟ್ಮೆಂಟ್ಗಳು ಹಾಗೂ ಆಸ್ಪತ್ರೆಯ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ನೂರಾರು ವರ್ಷ ಇತಿಹಾಸವಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಮುಂದಾಗ ದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೆರೆಯ ಪಕ್ಕ ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ಕೊಳಚೆ ನೀರು ಬಿಡುವುದನ್ನು ನಿಯಂತ್ರಿಸಿ ಅಪಾರ್ಟ್ಮೆಂಟ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
‘ಕೆರೆ ಅಭಿವೃದ್ಧಿ ಪ್ರಾಧಿಕಾರ ತಕ್ಷಣ ಕೆರೆಯ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದರೆ ಪುರಾತನ ಕೆರೆ ನಾಶವಾಗಿ ಕೊಳಚೆ ಹೊಂಡವಾಗಿ ಪರಿವರ್ತನೆ ಹೊಂದುತ್ತದೆ’ ಎಂದು ಸ್ಥಳೀಯ ನಿವಾಸಿ ಬಿ.ಎಲ್.ಎನ್.ಸಿಂಹ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.