ಬೆಂಗಳೂರು:‘ಜಾತಿ ಗಣತಿಯಿಂದ ರಾಜ್ಯದ ಜಾತಿಗಳ ಜನಸಂಖ್ಯೆ ಕುರಿತ ವಾಸ್ತವ ಬಹಿರಂಗವಾಗಲಿ. ಅದಕ್ಕೆ ತಕ್ಕಂತೆ ನಡೆದುಕೊಂಡರಾಯಿತು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಜಾತಿ ಸಮೀಕ್ಷೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ನಾವೀಗ ಭ್ರಮೆಯಲ್ಲಿದ್ದೇವೆ. ಅದರಿಂದಾಗಿಯೇ ಜಗಳಗಳಾಗುತ್ತಿವೆ. ಗಣತಿಯ ಅಂಕಿ–ಅಂಶ ಬಹಿರಂಗ ಪಡಿಸುವುದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ’ ಎಂದರು.
‘ಗೋವಿನ ಪೂಜೆ ಮಾಡುವವರು, ಹಾಲು ಕುಡಿಯುವವರು ಹಾಗೂ ತುಪ್ಪ ತಿನ್ನುವವರು ನಿಜವಾದ ಗೋರಕ್ಷಕರಲ್ಲ. ಗೋವು ಸಾಕುವವರೇ ನಿಜವಾದ ಗೋ
ರಕ್ಷಕರು. ಅವರನ್ನೂ ಕಡೆಗಣಿಸಲಾಗಿದೆ. ನಕಲಿ ಗೋರಕ್ಷಕರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಜಾತಿ ಗಣತಿ ಕುರಿತು ಪ್ರತಿಕ್ರಿಯಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಗಣತಿ ನಡೆದಾಗ ಅದಕ್ಕೆ ದೊಡ್ಡ ವಿರೋಧವೇನೂ ವ್ಯಕ್ತವಾಗಿರಲಿಲ್ಲ. ಈಗೇಕೆ ವಿವಾದ’ ಎಂದು ಪ್ರಶ್ನಿಸಿದರು.
‘ಜನಸಂಖ್ಯೆ ಆಧಾರದಲ್ಲಿ ನಿರ್ದಿಷ್ಟ ಜಾತಿಯ ಆರ್ಥಿಕ ಹಾಗೂ ರಾಜಕೀಯ ನಿರ್ಧಾರ ಆಗುವುದಿಲ್ಲ. ಜನಸಂಖ್ಯೆ ಕಡಿಮೆ ಇರುವ ಜಾತಿ ದುರ್ಬಲ ಎಂದು ಭಾವಿಸಬೇಕಾಗಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.