ADVERTISEMENT

ಜಿಲ್ಲಾ ಕನ್ನಡ ಸಮ್ಮೇಳನಕ್ಕೆ ಹುಲಿಕಲ್‌ ನಟರಾಜ್ ಅಧ್ಯಕ್ಷ

ದೊಡ್ಡಬಳ್ಳಾಪುರದಿಂದ ದಾಬಸ್‌ಪೇಟೆವರೆಗೆ ಬೈಕ್ ರ‍್ಯಾಲಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 19:46 IST
Last Updated 4 ಡಿಸೆಂಬರ್ 2017, 19:46 IST

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ದಾಬಸ್‌ಪೇಟೆಯಲ್ಲಿ ನಡೆಯಲಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ದೊಡ್ಡಬಳ್ಳಾಪುರದ ಡಾ.ಹುಲಿಕಲ್‌ ನಟರಾಜ್ ಆಯ್ಕೆಯಾಗಿದ್ದಾರೆ.

ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಗಣ್ಯರು, ಇದು ದೊಡ್ಡಬಳ್ಳಾಪುರಕ್ಕೆ ಸಂದ ಗೌರವವಾಗಿದೆ. ಇಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ದೊಡ್ಡಬಳ್ಳಾಪುರದ ಪರವಾಗಿ ವೇದಿಕೆಯಲ್ಲಿ ಗೌರವಾರ್ಪಣೆ ನಡೆಸುವುದು ಸೂಕ್ತ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ತಾಲ್ಲೂಕು ಘಟಕದಿಂದ ಕಾರ್ಯಕರ್ತರು ದೊಡ್ಡ ಬಳ್ಳಾಪುರದಿಂದ ದಾಬಸ್‌ಪೇಟೆವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ತಾಲ್ಲೂಕು ಅಧ್ಯಕ್ಷ ದೀಪು ಹೇಳಿದರು.

ADVERTISEMENT

ನಿಯೋಜಿತ ಸಮ್ಮೇಳನಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ 2019ರಲ್ಲಿ ನಡೆಯುವ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಸ್ಪರ್ಧೆ ನಿಶ್ಚಿತವಾಗಿದ್ದು, ಎಲ್ಲ ಕನ್ನಡಪರ ಮನಸ್ಸುಗಳ ಬೆಂಬಲವನ್ನು ನಿರೀಕ್ಷಿಸುತ್ತೇನೆ ಎಂದರು.

ಕಸಾಪವನ್ನು ಸಮಕಾಲೀನ ಚಿಂತನೆಗಳಿಗೆ ಪೂರಕವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕವಾಗಿ ಕಟ್ಟುವ ಅಗತ್ಯತೆ ಇದ್ದು, ಸಮಗ್ರ ಕನ್ನಡಿಗರ ಹಿತಾಸಕ್ತಿಯನ್ನು ಪರಿಷತ್ತು ಪ್ರತಿನಿಧಿಸುವ ಅಗತ್ಯವಿದೆ ಎಂದರು.

ಈ ಸಂಬಂಧ ಹಲವು ಗಣ್ಯರು ಮತ್ತು ಸಂಘಟನೆಗಳ ಸಲಹೆ ಪಡೆಯಲಾಗಿದೆ. ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಪರಿಷತ್ತಿನ ಸದಸ್ಯರನ್ನು ಭೇಟಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಸಭೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷೆ ಪ್ರಮೀಳಾ ಮಹದೇವ್, ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಪ್ರಭಾ, ಎಲ್.ಎನ್. ವಸುಂಧರಾದೇವಿ, ಎನ್.ಸಿ.ಲಕ್ಷ್ಮಿ, ಕರವೇ ಕನ್ನಡಿಗರ ಬಣದ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕರುನಾಡ ಸೇನೆ ತೆರದಾಳ್ ಶ್ರೀನಿವಾಸ್, ಮುಖಂಡರಾದ ನ.ಮಹದೇವ್, ನಂಜುಂಡೇಶ್ವರಸ್ವಾಮಿ, ಕೆ.ವಿ.ಪ್ರಭುಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.