ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬಿಳಿ ಹುಲಿಯ ಮೇಲೆ ಎರಡು ಹುಲಿಗಳು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಭಾನುವಾರ ನಡೆದಿದೆ.
ಈ ಉದ್ಯಾನದಲ್ಲಿ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಹುಲಿ ಸಫಾರಿಗೆ ಬಸ್ಸೊಂದು ಬಂದಾಗ ಒಳಬಿಡಲು ಕಾವಲುಗಾರರು ಗೇಟನ್ನು ತೆರೆದಿದ್ದರು. ಆಗ ಪಕ್ಕದ ಆವರಣದಲ್ಲಿದ್ದ ಬಿಳಿ ಹುಲಿಯೊಂದು ಗೇಟ್ ಮೂಲಕ ಒಳಬಂದಿದೆ. ಉದ್ಯಾನದಲ್ಲಿ ಸಾಮಾನ್ಯ ಹುಲಿಗಳು ಮತ್ತು ಬಿಳಿ ಹುಲಿಗಳನ್ನು ಪ್ರತ್ಯೇಕ ಆವರಣಗಳಲ್ಲಿ ಬಿಡಲಾಗಿದೆ.
ಬಿಳಿ ಹುಲಿಯು ದಾರಿ ತಪ್ಪಿ ಬೇರೊಂದು ಆವರಣಕ್ಕೆ ಬಂದ ಕೂಡಲೇ ದಾಳಿ ನಡೆಸಿದ ಹುಲಿಗಳು ಅದನ್ನು ಕಚ್ಚಿ ಗಾಯಗೊಳಿಸಿದ್ದು ಬೆನ್ನುಹುರಿಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ.
ಸಫಾರಿಯ ಗೇಟ್ನಲ್ಲಿದ್ದ ಕಾವಲುಗಾರರ ಕೌಶಲದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆಯಿದೆ. ಪ್ರಾಣಿಗಳ ಜೊತೆಗೆ ಪ್ರವಾಸಿಗರಿಗೂ ಆತಂಕ ಉಂಟಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.