ADVERTISEMENT

ಬೆಂಗಳೂರು ಕಾವ್ಯ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:33 IST
Last Updated 25 ಜುಲೈ 2017, 19:33 IST

ಬೆಂಗಳೂರು: ಆಟ–ಗಲಾಟಾ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ದ ಎರಡನೇ ಆವೃತ್ತಿ ಆಗಸ್ಟ್‌ 5 ಮತ್ತು 6 ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ.

ಕಾವ್ಯ ವಾಚನದ ಜೊತೆಗೆ ಕಾರ್ಯಾಗಾರವೂ ಇರುತ್ತದೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಬಂಗಾಳಿ, ಒಡಿಶಾ, ಮೈಥಿಲಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸುಮಾರು 50 ಕವಿತೆಗಳ ವಾಚನ ನಡೆಯಲಿದೆ.

‘ಕಳೆದ ವರ್ಷ ಉತ್ಸವ ಆಯೋಜಿಸಿದಾಗ ನಿರೀಕ್ಷೆಗೂ ಮೀರಿ ಯಶಸ್ಸು ದೊರೆತಿತ್ತು. ಸುಮಾರು ನಾಲ್ಕು ಸಾವಿರ ಜನ ಭಾಗವಹಿಸಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚು ಜನರ ನಿರೀಕ್ಷೆ ಇದೆ’ ಎಂದು ಉತ್ಸವ ಆಯೋಜಕರಾದ ಲಕ್ಷ್ಮೀ ಶಂಕರ್‌ ತಿಳಿಸಿದರು.

ADVERTISEMENT

ಉರ್ದು ಕವಿ ಗುಲ್ಜಾರ್‌ ಸಾಬ್‌ ಅವರು ನಡೆಸಿಕೊಡುವ ಕಾರ್ಯಕ್ರಮ ಈ ಬಾರಿಯ ಪ್ರಮುಖ ಆಕರ್ಷಣೆ. ಮೊದಲ ದಿನ ಗುಲ್ಜಾರ್‌ ಅವರು ತಮ್ಮ ಇತ್ತೀಚಿನ ಪುಸ್ತಕ ‘ಸಸ್ಪೆಕ್ಟೆಡ್‌ ಪೊಯಮ್ಸ್‌’ ಕುರಿತು ಮಾತನಾಡಲಿದ್ದಾರೆ. ಕೃತಿ ಅನುವಾದ ಮಾಡಿದ ಪವನ್‌ ವರ್ಮಾ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ. ಎರಡನೇ ದಿನ ಪವನ್‌ ಅವರು ‘ಯುಧಿಷ್ಠಿರ ಮತ್ತು ದ್ರೌಪದಿ’ ಕೃತಿ ಕುರಿತು ಮಾತನಾಡುತ್ತಾರೆ.

ಶೈನಿ ಆ್ಯಂಟನಿ ಅವರು ಉತ್ಸವದ ನಿರ್ದೇಶಕಿ. ‘ದಿ ಆರ್ಫನೇಜ್ ಫಾರ್ ವುಡ್ಸ್’, ‘ಬೇರ್‌ಫೀಟ್ ಆ್ಯಂಡ್ ಪ್ರೆಗ್ನೆಂಟ್’, ‘ವೆನ್ ಮೀರಾ ವೆಂಟ್ ಫೋರ್ತ್ ಆ್ಯಂಡ್ ಮಲ್ಟಿಪ್ಲೈಡ್’ ಸೇರಿದಂತೆ ಹಲವು ಸಣ್ಣ ಕಥೆ ಮತ್ತು ಕಾದಂಬರಿಗಳನ್ನು ಇವರು ರಚಿಸಿದ್ದಾರೆ.

ಯಾರು ಭಾಗವಹಿಸಲಿದ್ದಾರೆ?: ಹಿರಿಯ ಸಾಹಿತಿಗಳಾದ ಚಂದ್ರಶೇಖರ ಕಂಬಾರ ಮತ್ತು ಗಿರೀಶ್‌ ಕಾರ್ನಾಡ, ಶಿಲ್ಲಾಂಗ್‌ನಿಂದ ಕವಯತ್ರಿ ನವನೀತಾ ಕಾಂಗೊ, ವೇಲ್ಸ್‌ನಿಂದ ನಿಯಾ ಡೇವಿಸ್‌, ತಮಿಳು ಕವಯತ್ರಿ ಸಲ್ಮಾ, ಉರ್ದು ಕವಿ ಅಯಾಜ್‌ ರಸೂಲ್‌ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ: http://www.bengalurupoetryfestival.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.