ADVERTISEMENT

ರಕ್ಷಣೆ ಕೋರಿದ ಕಾರ್ಪೊರೇಟರ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:35 IST
Last Updated 28 ಜುಲೈ 2016, 19:35 IST

ಬೆಂಗಳೂರು: ‘ಶಾಸಕ ಮುನಿರತ್ನ ಹಾಗೂ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್ ಅವರಿಂದ ಜೀವ ಬೆದರಿಕೆ ಇದೆ. ಹೀಗಾಗಿ, ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಕಾರ್ಪೊರೇಟರ್ ಮಮತಾ ಅವರು ನಗರ ಪೊಲೀಸ್ ಕಮಿಷನರ್‌ ಎನ್‌.ಎಸ್. ಮೇಘರಿಕ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಡಿ.31ರಂದು ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಜೆ.ಪಿ.ಪಾರ್ಕ್ ಒತ್ತುವರಿ ವಿಚಾರವಾಗಿ ನನ್ನ ಜತೆ ವಾಗ್ವಾದ ನಡೆಸಿದ್ದ ಜಿ.ಕೆ.ವೆಂಕಟೇಶ್, ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಹಲಸೂರು ಗೇಟ್ ಠಾಣೆಗೆ ದೂರು ಕೊಟ್ಟಿದ್ದರು’.

‘ಅದಕ್ಕೆ ಪ್ರತಿಯಾಗಿ ನಾನು ಸಹ ಮುನಿರತ್ನ ಹಾಗೂ ವೆಂಕಟೇಶ್ ಅವರಿಂದ ಜೀವ ಬೆದರಿಕೆ ಇರುವುದಾಗಿ ಯಶವಂತಪುರ ಠಾಣೆಗೆ ದೂರು ಸಲ್ಲಿಸಿದ್ದೆ. ಆದರೆ, ನಾನು ಕೊಟ್ಟ ದೂರಿನ ಬಗ್ಗೆ ಈವರೆಗೂ ಯಾವುದೇ ತನಿಖೆ ಆಗಿಲ್ಲ’.

‘ವಾರ್ಡ್ ಪರಿಶೀಲನೆಗೆ ತೆರಳಿದಾಗ ಶಾಸಕರ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ನನ್ನ ಹಾಗೂ ಪತಿಯ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಸುತ್ತಾರೆ. ಹೀಗಾಗಿ ನಮಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಮಮತಾ ಪತ್ರದಲ್ಲಿ ಕೋರಿದ್ದಾರೆ.

ಮನವಿ ಸ್ವೀಕರಿಸಿದ ಮೇಘರಿಕ್, ‘ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಇನ್‌ಸ್ಪೆಕ್ಟರ್‌ ಹಾಗೂ ಸಂಬಂಧಪಟ್ಟ ಡಿಸಿಪಿ ಅವರಿಂದ ಮಾಹಿತಿ ಪಡೆಯುತ್ತೇನೆ.

ಸಹ ಅಧಿಕಾರಿಗಳ ಜತೆ ಚರ್ಚಿಸಿ ನಿಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.