ADVERTISEMENT

ರೌಡಿ ಶೀಟರ್‌ ಕೊಲೆ: ಬಂಧನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:43 IST
Last Updated 27 ನವೆಂಬರ್ 2014, 19:43 IST

ಬೆಂಗಳೂರು:  ಕಾಡುಗೊಂಡನಹಳ್ಳಿ ಸಮೀಪದ ಬಾಗಲೂರು ಲೇಔಟ್‌ನಲ್ಲಿ ನಡೆದಿದ್ದ  ರೌಡಿ ಶೀಟರ್‌ ವಿನೋದ್‌ (30) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಸ್ಟಾಲಿನ್‌ (19), ಶಶಿ (27), ಶ್ರೀನಿವಾಸ (29), ಅರುಣ್‌ (30), ಸಂಪಂಗಿ (22), ವಿಜಯ್ (19) ಬಂಧಿತರು. ಆರೋಪಿಗಳೆಲ್ಲರೂ ಬಾಗಲೂರು ಲೇಔಟ್‌ ನಿವಾಸಿಗಳಾಗಿದ್ದಾರೆ.

ಆರೋಪಿಗಳು ನ.23ರಂದು ರಾತ್ರಿ ವಿನೋದ್‌ನ ಕಣ್ಣಿಗೆ ಖಾರದಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಕಾಡುಗೊಂಡನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿನೋದ್‌, 2012ರಲ್ಲಿ ಕೊಲೆಯಾಗಿದ್ದ ರೌಡಿ ಶೀಟರ್‌ ಡ್ಯಾನಿಯಲ್‌ನ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.

ಇತ್ತೀಚೆಗೆ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ. ಅದಕ್ಕೆ ಪ್ರತೀಕಾರವಾಗಿ ಡ್ಯಾನಿಯಲ್‌ನ ಮಗ ಸ್ಟಾಲಿನ್‌, ವಿನೋದ್‌ನ ಕೊಲೆಗೆ ಸಂಚು ರೂಪಿಸಿದ್ದ. ಸಂಚಿನಂತೆ ಸಂಬಂಧಿಗಳಾದ ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.