ಬೆಂಗಳೂರು: ವೀಸಾ ಅವಧಿ ಮುಗಿದ ಬಳಿಕವೂ ಕಾನೂನು ಬಾಹಿರವಾಗಿ ರಾಜ್ಯದಲ್ಲಿ ನೆಲೆಸಿರುವ ಹಾಗೂ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪ ಹೊತ್ತ ವಿದೇಶಿಯರ ಬಗೆಗಿನ ಎಲ್ಲ ವಿವರಗಳನ್ನು ಸಂಗ್ರಹಿಸಿ ನೀಡಬೇಕು ಎಂದು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಾಮೀನು ಕೋರಿ ನೈಜೀರಿಯಾ ಪ್ರಜೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ವಿಚಾರಣೆ ನಡೆಸಿ, ಈ ಕುರಿತಂತೆ ಸಹಾಯಕ ಸಾಲಿಸಿಟರ್ ಜನರಲ್ ಕೃಷ್ಣ ಎಸ್.ದೀಕ್ಷಿತ್ ಅವರಿಗೆ ಸಮಗ್ರ ವಿವರ ಸಲ್ಲಿಸಲು ಸೂಚಿಸಿತು.
‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಎಲ್ಲ ಅಂಕಿ ಅಂಶ ನೀಡಬೇಕು. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ವಿದೇಶಿಯರ ಸಂಖ್ಯೆ ಎಷ್ಟಿದೆ? ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ನೆಲೆಸಿದವರ ವಿವರಗಳೇನು? ಈ ದಿಸೆಯಲ್ಲಿ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಕೋರ್ಟ್ಗೆ ತಿಳಿಸಿ’ ಎಂದು ಚಂದ್ರಶೇಖರ್ ಸೂಚಿಸಿದರು.
‘ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಎಷ್ಟು ಜನ ವಿದೇಶಿಯರಿಂದ ಎಷ್ಟು ದಂಡ ವಸೂಲು ಮಾಡಲಾಗಿದೆ ಮತ್ತು ಯಾವ ಆಧಾರದ ಮೇಲೆ ಈ ದಂಡ ಪಾವತಿ ಮಾಡಿಸಿಕೊಳ್ಳಲಾಗಿದೆ ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಎಷ್ಟು ಪ್ರಕರಣ ದಾಖಲಾಗಿವೆ’ ಎಂಬ ವಿವರ ನೀಡಿ ಎಂದೂ ಚಂದ್ರಶೇಖರ್ ತಾಕೀತು ಮಾಡಿದರು.ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.