ಬೆಂಗಳೂರು: ‘ಉತ್ತರಹಳ್ಳಿ ಸಮೀಪ ರಾಮಚಂದ್ರಪ್ಪ ಬಡಾವಣೆಯಲ್ಲಿ ತೆರೆದಿರುವ ‘ಸ್ಕಾಚ್ ಯಾರ್ಡ್’ ಸಗಟು ಮದ್ಯ ಮಾರಾಟ ಮಳಿಗೆಯನ್ನು ಮುಚಿಸಬೇಕು’ ಎಂದು ಒತ್ತಾಯಿಸಿ ಬಡಾವಣೆಯ ನಿವಾಸಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು.
‘ಬಸ್ ನಿಲ್ದಾಣದ ಬಳಿಯೇ ಮಳಿಗೆಯನ್ನು ತೆರೆಯಲಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಈ ಸ್ಥಳದಿಂದಲೇ ಬಸ್ ಹತ್ತಬೇಕು. ಮದ್ಯ ಮಾರಾಟದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಮಳಿಗೆ ತೆರೆಯಲು ಅವಕಾಶ ನೀಡದಂತೆ ಒತ್ತಾಯಿಸಿ ಅಬಕಾರಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
‘ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಮಳಿಗೆಯನ್ನು ಬೇರೆಡೆ ಸ್ಥಳಾಂತರ ಮಾಡಬೇಕು’ ಎಂದು ಶಾಸಕ ಎಂ.ಕೃಷ್ಣಪ್ಪ ಒತ್ತಾಯಿಸಿದರು.
‘ಕಾನೂನು ಪ್ರಕಾರವೇ ಮಳಿಗೆಯನ್ನು ತೆರೆಯಲಾಗಿದೆ. ಅಬಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರವಾನಗಿ ನೀಡಿದ್ದಾರೆ. ಸಗಟು ಮಾರಾಟ ಬಿಟ್ಟು, ಚಿಲ್ಲರೆ ವ್ಯಾಪಾರ ಮಾಡುತ್ತಿಲ್ಲ. ಬಾರ್ ಸಹ ನಡೆಸುತ್ತಿಲ್ಲ. ಕೆಲವರು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ‘ಸ್ಕಾಚ್ ಯಾರ್ಡ್’ ಮಳಿಗೆಯ ಮಾಲೀಕ ಸಂಪತ್ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.