ಬೆಂಗಳೂರು: ಬಸವೇಶ್ವರನಗರದ ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆಯ ಎಲೆಕ್ಟ್ರಿಕ್ ಪ್ಯಾನಲ್ ಬೋರ್ಡ್ ಕೊಠಡಿಗೆ ಮಳೆ ನೀರು ಬರುತ್ತಿದ್ದು, ಶಾರ್ಟ್ ಸರ್ಕೀಟ್ ಸಂಭವಿಸುವ ಭೀತಿಯಲ್ಲಿ ರೋಗಿಗಳಿದ್ದಾರೆ.
ಕರ್ನಾಟಕ ಆರೋಗ್ಯ ಪದ್ಧತಿ ಸುಧಾರಣಾ ಅಭಿವೃದ್ಧಿ ಯೋಜನಾ (ಕೆಎಚ್ಎಸ್ಆರ್ಡಿಪಿ) ವಿಭಾಗವು ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಿದೆ. ಜೂನ್ 6ರಂದು ಆಸ್ಪತ್ರೆಯನ್ನು ಉದ್ಘಾಟಿಸಲಾಗಿತ್ತು.
‘ಐದು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಕಟ್ಟಡದ ನೆಲಮಾಳಿಗೆಯಲ್ಲಿರುವ ಎಲೆಕ್ಟ್ರಿಕ್ ಪ್ಯಾನಲ್ ಬೋರ್ಡ್ ಕೊಠಡಿಗೆ ನೀರು ನುಗ್ಗಿತ್ತು. ಶಾರ್ಟ್ ಸರ್ಕೀಟ್ ಆಗಿದ್ದರಿಂದ ಯುಜಿ ಕೇಬಲ್ ಸುಟ್ಟುಹೋಗಿತ್ತು. ಕಟ್ಟಡದ ಬದಿಯಲ್ಲೇ ಗುಡ್ಡ ಇರುವುದರಿಂದ ನೀರು ನಿಂತರವಾಗಿ ಹರಿದುಬರುತ್ತಿದೆ. ಈ ನೀರನ್ನು ಕೆಎಚ್ಎಸ್ಆರ್ಡಿಪಿ ಸಿಬ್ಬಂದಿಯು ಹೊರಹಾಕುತ್ತಿದ್ದಾರೆ. ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ’ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದರು.
‘ಆಸ್ಪತ್ರೆಯು ನಾಲ್ಕು ಅಂತಸ್ತಿನ ಕಟ್ಟಡ ಹೊಂದಿದೆ. 1ರಿಂದ 3ನೇ ಅಂತಸ್ತಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಕೆಲ ರೋಗಿಗಳು ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.