ADVERTISEMENT

‘ಚೈತ್ರ’ದಲ್ಲಿ ನೋವು–ನಲಿವು ಭಾವ ಸಮ್ಮಿ ಲನ

ರಾಷ್ಟ್ರಕವಿ ಮನೆಯಲ್ಲಿ ಹೃದಯಸ್ಪರ್ಶಿ ಸಮಾರಂಭ: ಅರೆಗಣ್ಣು ತೆರೆದು ನಸುನಕ್ಕ ಜಿಎಸ್‌ಎಸ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:27 IST
Last Updated 2 ಡಿಸೆಂಬರ್ 2013, 19:27 IST

ಬೆಂಗಳೂರು: ಗುರುವಿನ ಆರೋಗ್ಯ ಹದಗೆಟ್ಟಿರುವ ನೋವು ಒಂದೆಡೆ, ಬಹುದಿನಗಳಿಂದ ಗುರುವೇ ನಿರೀಕ್ಷೆ ಮಾಡಿದ್ದ ‘ಕೃತಿ’ಯ ಲೋಕಾರ್ಪಣೆ ಸಂಭ್ರಮ ಇನ್ನೊಂದೆಡೆ. ‘ಹಣತೆ’ ಕವಿಯೆಂದೇ ಖ್ಯಾತಿ ಪಡೆದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನಿವಾಸ ‘ಚೈತ್ರ’ದಲ್ಲಿ ಸೋಮವಾರ ಹರಿದ ಭಾವವೈವಿಧ್ಯದ ಝಲಕ್‌ ಇದು.

ಜಿ.ಎಸ್‌.ಎಸ್‌. ಅವರು ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು,  ಪ್ರಿಯದರ್ಶಿನಿ ಪ್ರಕಾಶನ  ಅವರ ಶಿಷ್ಯರು, ವಿದ್ವಾಂಸರು, ಕುಟುಂಬ ಸದಸ್ಯರ ಸಮ್ಮು­ಖದಲ್ಲಿ  ಜಿಎಸ್ಎಸ್ ಬದುಕು–ಬರಹಗಳ ಸಮಗ್ರ ಕೃತಿಯನ್ನು ಲೋಕಾರ್ಪಣೆ ಮಾಡಿತು. ಅರೆ ಘಳಿಗೆ ಅಸ್ಪಷ್ಟವಾಗಿ ಮಾತನಾಡಿ ಜಿ.ಎಸ್.ಎಸ್. ನಿದ್ರೆಗೆ ಜಾರುತ್ತಿದ್ದರು.

ಈ ಸಂದರ್ಭದಲ್ಲಿ ‘ನೆನಪಿನಂಗಳದಲ್ಲಿ – ಡಾ.ಜಿ. ಎಸ್. ಶಿವರುದ್ರಪ್ಪನವರ ಬದುಕು–ಬರಹಗಳ ಅನು ಶೀಲನ’ ಕೃತಿಯನ್ನು ಹಿರಿಯ ವಿಮರ್ಶಕ ಡಾ.ಜಿ.ಎಸ್. ಸಿದ್ದಲಿಂಗಯ್ಯ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ‘ಜಿ.ಎಸ್.ಎಸ್‌. ಕನ್ನಡ ಸಾರಸ್ವತ ಲೋಕದ ದ್ರೋಣಾಚಾರ್ಯ. ಆದರೆ, ಅವರೆಂದೂ ಶಿಷ್ಯರ ಹೆಬ್ಬೆರಳನ್ನು ಕೇಳಲಿಲ್ಲ, ಯಾರಿಗೂ ಪಾಠ ಹೇಳಿಕೊಡಲು ಸಾಧ್ಯವಿಲ್ಲವೆಂದು ದೂರ ಸರಿಸಲಿಲ್ಲ’ ಎಂದು ಬಣ್ಣಿಸಿದರು.
‘ಸಾಹಿತ್ಯದ ಕುರಿತು ಚರ್ಚೆ ಮಾಡುತ್ತಾ ಇದ್ದಾಗ ಮಾತ್ರ ಸಾಹಿತಿ ಬೆಳೆಯಲು ಸಾಧ್ಯ. ಸಾಹಿತ್ಯದ ಕುರಿತು ಜಗಳ ನಡೆಯುವಾಗ ಅದು ಸಂಗೀತವನ್ನು ಆಲಿಸಿದಂತೆ ಇರಬೇಕು ಎಂಬ ತತ್ವದಲ್ಲಿ ನಂಬಿಕೆ ಇಟ್ಟವರು’ ಎಂದು ಹೇಳಿದರು.

‘ಸತ್ಯ ನಿಷ್ಠುರಿ ಜಿ.ಎಸ್.ಎಸ್ ಎಂದೂ ಕಠೋರ­ವಾಗಿ ಮಾತನಾಡಿದವರಲ್ಲ. ಅವರ ‘ಶಾರದೆ’ ಕವನ ಅಸಾಧಾರಣ ಪ್ರಕೃತಿ ಚಿತ್ರಣವನ್ನು ಮೊಗೆದು ಕೊಡು­ತ್ತದೆ. ಅವರ ಕವಿತೆಗಳಲ್ಲಿ ಆಧ್ಯಾತ್ಮದ ಕಳೆ ಯಿದೆ. ಅನುಭಾವಿಕ ನೆಲೆಯಿದೆ’ ಎಂದು ವಿಶ್ಲೇ ಷಿಸಿದರು. ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ‘ಸರ ಳತೆ, ಮುಗ್ಧತೆ  ಹಾಗೂ ಮಗು ಮಾದರಿಯ ಮನಸ್ಸಿಗೆ ಹೆಸರಾದವರು ಜಿ.ಎಸ್‌.ಎಸ್‌. ಬೆಳಗಿನ ಜಾವದ ಹವಾ ಸೇವನೆಗಾಗಿ ಸತತವಾಗಿ ಮೂರು ವರ್ಷಗಳ ಕಾಲ ಅವರೊಂದಿಗೆ ವಾಯು ವಿಹಾರ ಮಾಡಿದ್ದೇನೆ.

ಸಾಹಿತ್ಯದ ಬಗ್ಗೆ ಚರ್ಚೆ ಮಾಡುವಾಗ ಎಂದಿಗೂ ಅನ್ಯರ ಬಗ್ಗೆ ಟೀಕೆ ಮಾಡಿ ದವರಲ್ಲ’ ಎಂದು ಹೇಳಿದರು. ‘ವಾಯು ವಿಹಾರ ಮಾಡುವಾಗೆಲ್ಲ  ಸೂರ್ಯೋ­ದಯ ಕಂಡ ತಕ್ಷಣವೇ ಅವರು ಅಲ್ಲೇ ನಿಂತು ಧ್ಯಾನಸ್ಥರಾಗಿ ಬಿಡುತ್ತಿದ್ದರು’ಎಂದು ತಿಳಿಸಿದರು. ‘ನಾನು ಮತ್ತು ಅವರೊಮ್ಮೆ ಕೇರಳಕ್ಕೆ ಹೋಗಿ ದ್ದೆವು. ಹೋಟೆಲ್‌ವೊಂದರಲ್ಲಿ ಬೆಳಗಿನ ತಿಂಡಿಯ ಪಟ್ಟಿ  ಹಾಗೂ ಅದರ ದರವನ್ನು ನೋಡಲು ತಿಳಿಸಿ ದ್ದರು.

ADVERTISEMENT

ಮಸಾಲ ದೋಸೆಯೊಂದಕ್ಕೆ ₨ 65 ಎಂದು ತಿಳಿದು ಅಷ್ಟೊಂದು ದುಬಾರಿ ಬೇಡ, ಎರಡು ಇಡ್ಲಿ ಸಾಕು ಎಂದಿದ್ದರು. ಊಟ, ತಿಂಡಿ, ವಸತಿಯ ವೆಚ್ಚ ಕೇರಳ ಸರ್ಕಾರವೇ ಭರಿಸುತ್ತದೆ ಎಂದು ಗೊತ್ತಿದ್ದರೂ ಕೂಡ ಅವರು ಪ್ರಾಮಾಣಿಕತೆ ಹಾಗೂ ಸರಳತೆಯನ್ನು ಮೆರೆದರು’ ಎಂದು ಅವರು ನೆನಪಿಸಿಕೊಂಡರು.
ಕವಿತೆಗಳೇ ಕವಿಯ ನಾಲಿಗೆ: ‘ಕವಿ  ಮಲಗಿದ್ದರೂ, ಆತನ ಚೇತನ ಮಲಗುವುದಿಲ್ಲ.  ಕವಿತೆಗಳೇ ಕವಿಯ ನಾಲಿಗೆ. ಜಿ.ಎಸ್.ಎಸ್ ತಮ್ಮ  ಕವಿತೆಗಳ ಮೂಲಕ ನುಡಿಯುತ್ತಲೇ ಇರುತ್ತಾರೆ’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.