ADVERTISEMENT

‘ಮಕ್ಕಳ ಸುರಕ್ಷತೆಗೆ ಒಗ್ಗಟ್ಟಿನ ಶ್ರಮ ಅಗತ್ಯ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:56 IST
Last Updated 6 ಮಾರ್ಚ್ 2015, 19:56 IST
ಜಯನಗರದ ಸಾಗರ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣದಲ್ಲಿ ಭರತನಾಟ್ಯ ಕಲಾವಿದೆ ವಾಣಿ ಗಣಪತಿ, ಎಸಿಪಿ ಡಾ. ಸೌಮ್ಯಲತಾ ಹಾಗೂ ವೈದ್ಯೆ ಟಿ.ಎಸ್.ವಿದ್ಯಾ ತಮಾಷೆಯಲ್ಲಿ ತೊಡಗಿದ್ದ ಕ್ಷಣ
ಜಯನಗರದ ಸಾಗರ್ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣದಲ್ಲಿ ಭರತನಾಟ್ಯ ಕಲಾವಿದೆ ವಾಣಿ ಗಣಪತಿ, ಎಸಿಪಿ ಡಾ. ಸೌಮ್ಯಲತಾ ಹಾಗೂ ವೈದ್ಯೆ ಟಿ.ಎಸ್.ವಿದ್ಯಾ ತಮಾಷೆಯಲ್ಲಿ ತೊಡಗಿದ್ದ ಕ್ಷಣ   

ಬೆಂಗಳೂರು: ‘ಲೈಂಗಿಕ ದೌರ್ಜನ್ಯದ ಕುರಿತು ಶಾಲಾ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಉದ್ಭವವಾಗಿರುವ ಆತಂಕ ಕಡಿಮೆ ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ’ ಎಂದು ಭರತನಾಟ್ಯ ಕಲಾವಿದೆ ವಾಣಿ ಗಣಪತಿ ಅಭಿಪ್ರಾಯಪಟ್ಟರು.

ಜಯನಗರದ ಸಾಗರ್ ಆಸ್ಪತ್ರೆಯಲ್ಲಿ ‘ಮಹಿಳಾ ಸಬಲೀಕರಣ ಹಾಗೂ ಮಾನವೀಯ ಮೌಲ್ಯ’ ವಿಷಯ ಕುರಿತು ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸರ್ಕಾರ, ಸಾರ್ವಜನಿಕರು  ಹಾಗೂ ಖಾಸಗಿ ಸಂಸ್ಥೆಗಳು ಒಟ್ಟಾಗಿ ಸೇವೆ ಸಲ್ಲಿಸುವ ಅಗತ್ಯವಿದೆ’ ಎಂದರು.

‘ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವುದು ದುರಂತ ಬೆಳವಣಿಗೆ. ಇಂಥ ಪ್ರಕರಣಗಳು ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿವೆ. ವ್ಯಕ್ತಿಗಳ ಮನಸ್ಥಿತಿಯನ್ನು ಬದಲಾಯಿ­ಸು­ವುದರ ಜತೆಗೆ ಇಡೀ ಸಮಾಜದ ಪರಿವರ್ತನೆ ಆಗಬೇಕಿದೆ. ಮಹಿಳೆಯನ್ನು ಪೂಜ್ಯ ಭಾವದಿಂದ ಕಾಣುವ ಹಾಗೂ ಮಕ್ಕಳನ್ನು ಅಕ್ಕರೆಯಿಂದ ನೋಡುವ ದಿನಗಳನ್ನು ಸೃಷ್ಟಿಸಬೇಕಿದೆ’ ಎಂದು ಸಲಹೆ ನೀಡಿದರು.

‘ದೆಹಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಸುದ್ದಿ ವಾಹಿನಿಯೊಂದು ಇತ್ತೀಚಿಗೆ ಸಂದರ್ಶನ ಮಾಡಿತು. ಅದರ ತುಣಕನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿತು. ಇಂಥ ಘಟನೆಗಳು ಮಹಿಳೆ­ಯರಲ್ಲಿ ಅಭದ್ರತೆಯ ಭಾವವನ್ನು ಹೆಚ್ಚಿಸುತ್ತವೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಕೂಡ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸಿಪಿ ಡಾ. ಸೌಮ್ಯಲತಾ ಮಾತನಾಡಿ, ‘ಮಹಿಳೆಯರು ಮನೆಯಲ್ಲಿ, ರಸ್ತೆಗಳಲ್ಲಿ, ಕೆಲಸದ ಸ್ಥಳದಲ್ಲಿ ಸದಾ ಎಚ್ಚರದಿಂದ ಇರಬೇಕು. ಆತ್ಮರಕ್ಷಣೆಗೆ ಅಗತ್ಯ ವಿದ್ಯೆಗಳನ್ನು ಕಲಿಯಬೇಕು. ಶಾಲಾ ಅವಧಿಯಿಂದಲೇ ಹೆಣ್ಣು ಮಕ್ಕಳಿಗೆ ಕರಾಟೆ ಅಭ್ಯಾಸ ಮಾಡಿಸಬೇಕು. ಕ್ರೀಡೆ ಹಾಗೂ ಸಾಹಸ ಚಟುವಟಿಕೆಗಳು ಬಾಲಕರಿಗೆ ಮಾತ್ರ ಸಿಮೀತವಾಗ­ಬಾರದು’ ಎಂದು ಹೇಳಿದರು.

ಕುಮಾರನ್ ಚಿಲ್ಡ್ರನ್ ಹೋಂನ ಪ್ರಾಂಶುಪಾಲರಾದ ದೀಪಾ ಶ್ರೀಧರ್, ಸಾಗರ್ ಆಸ್ಪತ್ರೆಯ ವೈದ್ಯೆ ಟಿ.ಎಸ್.ವಿದ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಂಗಾಗ ದಾನ ಮಾಡಿದ 8 ಮಹಿಳೆಯರಿಗೆ ಇದೇ ಸಮಯದಲ್ಲಿ ಸನ್ಮಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.