ADVERTISEMENT

‘ಸಾಂಸ್ಕೃತಿಕ ಮೌಲ್ಯಗಳ ನೆಲೆಯಲ್ಲಿ ಸಂಶೋಧನೆ’

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:32 IST
Last Updated 29 ಜುಲೈ 2015, 19:32 IST

ಬೆಂಗಳೂರು: ‘ಆಯಾ ಪ್ರದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ಗಳು ನಡೆಯಬೇಕು’ ಎಂದು ವಿಶ್ವ ಎಂಜಿನಿಯರಿಂಗ್ ಸಂಸ್ಥೆಗಳ ಒಕ್ಕೂಟದ ಚುನಾಯಿತ ಅಧ್ಯಕ್ಷ ಜಾರ್ಜ್ ಸ್ಪಿಟಾಲ್ನಿಕ್ ಅವರು  ಹೇಳಿದರು.

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ, ಎನ್‌ಡಿಆರ್‌ಎ ಸೇರಿದಂತೆ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ  ಆಯೋಜಿಸಲಾಗಿದ್ದ ಎರಡು ದಿನಗಳ ಮೂರನೇ ಭಾರತೀಯ ತಂತ್ರಜ್ಞಾನ ಸಮಾವೇಶದಲ್ಲಿ ಬುಧವಾರ ಅವರು ಮಾತನಾಡಿದರು.

‘ಜ್ಞಾನ ಹೆಚ್ಚಿಸಿಕೊಳ್ಳುವತ್ತ ಜನರ ಆಸಕ್ತಿ ಈಗ ಹೆಚ್ಚಾಗಿದೆ. ಸಂಶೋಧನೆಗಳನ್ನು ಪ್ರಾಯೋಗಿಕವಾಗಿ ಅಳವಡಿಸುವುದು ಬಹಳ ಮುಖ್ಯ. ಉದ್ಯಮಶೀಲತಾ ವಾತಾವರಣ ಹಾಗೂ ಸಾಮರ್ಥ್ಯ ವೃದ್ಧಿಸುವ ಮೂಲಕ ಉದ್ಯಮ ಕ್ಷೇತ್ರದ ಬೆಳವಣಿಗೆ ಸಾಧ್ಯ’ ಎಂದು ಸ್ಪಿಟಾಲ್ನಿಕ್‌  ಅಭಿಪ್ರಾಯಪಟ್ಟರು.

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಯ ಅಧ್ಯಕ್ಷ ಡಾ. ಎಲ್.ವಿ. ಮುರಳಿಕೃಷ್ಣ ರೆಡ್ಡಿ ಅವರು ಮಾತನಾಡಿ, ‘ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ
ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ಜಾಗತಿಕ ಮಟ್ಟದಲ್ಲಿ  ಗುರುತಿಸಿಕೊಳ್ಳುವ ಅಗತ್ಯವಿದೆ. ಸಂಶೋಧನೆಗಳಿಗೆ ಕೈಗಾರಿಕೆಗಳು ಹೆಚ್ಚು ಉತ್ತೇಜನ ನೀಡಬೇಕು. ದೇಶದ ಬೆನ್ನೆಲುಬಾದ ಸಣ್ಣ  ಹಾಗೂ ಮಧ್ಯಮ ಕೈಗಾರಿಕೆಗಳನ್ನು ಬಲಗೊಳಿಸಬೇಕಾದ ಅಗತ್ಯವಿದೆ’ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿ ಡಾ.ಎಚ್. ಮಹೇಶಪ್ಪ ಅವರು  ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಭಾರತದಲ್ಲಿ  ತಯಾರಿಸಿ’  ಮತ್ತು ‘ಡಿಜಿಟಲ್ ಇಂಡಿಯಾ’  ಯೋಜನೆಗಳಿಂದ ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದರು.

ಜಾಗತಿಕ ಮಟ್ಟದ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಈ ಯೋಜನೆಗಳು ಸಹಕಾರಿಯಾಗಲಿವೆ. ಡಿಜಿಟಲ್ ಇಂಡಿಯಾ ಮೂಲಕ ಹಳ್ಳಿ, ಪಟ್ಟಣಗಳು ತಂತ್ರಜ್ಞಾನ ಸ್ನೇಹಿಯಾಗಲು ಸಹಕಾರಿಯಾಗಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.