ಬೆಂಗಳೂರು: ‘ಪೈಪ್ಲೈನ್ ಅಳವಡಿಕೆಗೆ ತೆಗೆದ ಗುಂಡಿಗಳನ್ನು ಮುಚ್ಚಿಲ್ಲ’ ಎಂದು ದೂರಿ ಹೆಣ್ಣೂರು ನಿವಾಸಿಗಳು ಮಂಗಳವಾರ ಜಲಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
‘ಕಳೆದ ವರ್ಷ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಹೆಣ್ಣೂರು ಸೇತುವೆ ಬಳಿಯಿಂದ ಕೊತ್ತನೂರು ಮುಖ್ಯರಸ್ತೆ ಅಗೆಯಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆಯನ್ನು ಸರಿಪಡಿಸುವಂತೆ ಕೋರಿದರೂ ಜಲಮಂಡಳಿ ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜೇಶ್ ಗೌಡ ದೂರಿದರು.
‘ಈ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಸದಸ್ಯ ಅನಂದ್ ಅವರಿಗೆ ತಿಳಿಸಿದರೂ ಗಮನ ಕೊಟ್ಟಲ್ಲ’ ಎಂದು ಸ್ಥಳೀಯ ಸಾಮ್ಯುವೆಲ್ ಆರೋಪಿಸಿದರು. ಗುಂಡಿಗಳಿಂದಾಗಿ ಪ್ರತಿದಿನ ಅಪಘಾತಗಳು ಸಂಭವಿಸುತ್ತವೆ ಎಂದು ಹೆಣ್ಣೂರು ನಿವಾಸಿಗಳ ಸಂಘದ ಅಧ್ಯಕ್ಷ ಮುನಿರಾಜು ದೂರಿದರು.
‘ಜನರು ಎದುರಿಸುತ್ತಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಎಂಜಿನಿಯರ್ ಗಳಿಗೆ ಈ ಸಮಸ್ಯೆ ಬಗೆಹರಿಸಲು ಕೋರಲಾಗಿದೆ. ಕೊತ್ತನೂರು ವ್ಯಾಪ್ತಿಯಿಂದ ಹೆಣ್ಣೂರು ಸೇತುವೆವರೆಗೆ ರಸ್ತೆ ಗುಂಡಿ ಮುಚ್ಚಿ ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಬಿಬಿಎಂಪಿ ಸದಸ್ಯ ಆನಂದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.