ADVERTISEMENT

ಈಜುಕೊಳ, ಮಲ್ಟಿಜಿಮ್‌ ಯೋಜನೆ ರದ್ದುಕೋರಿ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 19:14 IST
Last Updated 11 ಅಕ್ಟೋಬರ್ 2018, 19:14 IST

ಬೆಂಗಳೂರು: ‘ರಾಜಾಜಿನಗರದ ಮರಿಯಪ್ಪ ಪಾಳ್ಯದ ಪಾರ್ಕ್ ಜಾಗದಲ್ಲಿನ ಈಜುಕೊಳ, ಮಲ್ಟಿ ಜಿಮ್‌ ಹಾಗೂ ಕ್ರೀಡಾ ಸಮುಚ್ಛಯ ನಿರ್ಮಾಣ ಯೋಜನೆ ರದ್ದುಪಡಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಪ್ರಕಾಶ್‌ನಗರದ ಜೆ.ಶ್ರೀನಿವಾಸನ್ ಸಲ್ಲಿಸಿರುವ ಈ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಈ ವಿಷಯದ ಬಗ್ಗೆ ಪಾಲಿಕೆಯಿಂದ ಮಾಹಿತಿ ಪಡೆದು ಸಲ್ಲಿಸಿ’ ಎಂದು ಪ್ರತಿವಾದಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲರಿಗೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ADVERTISEMENT

ಅರ್ಜಿದಾರರ ಮನವಿ ಏನು?: ‘ಅಧಿಸೂಚಿತ ಪಟ್ಟಿಯಲ್ಲಿರುವ ಪಾರ್ಕ್‌ಗಳಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಇದು ಕರ್ನಾಟಕ ಪಾರ್ಕ್, ಆಟದ ಮೈದಾನ ಮತ್ತು ಮುಕ್ತ ಪ್ರದೇಶಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ–1985ರ ಉಲ್ಲಂಘನೆ. ಆದ್ದರಿಂದ, ಕಟ್ಟಡ ನಿರ್ಮಾಣ ತಡೆಯಲು ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಅರ್ಜಿದಾರರ ಪರ ಜಿ.ಆರ್.ಮೋಹನ್‌ ವಕಾಲತ್ತು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.