ಭಾಲ್ಕಿ: ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಪಾತ್ರ ಮಹತ್ವದಾಗಿತ್ತು ಎಂದು ಬಿಆರ್ಸಿ ಸಮನ್ವಯಾಧಿಕಾರಿ ಮಲ್ಲಿನಾಥ ಸಜ್ಜನ್ ನುಡಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ 60 ರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಮರಾಠಿ, ಉರ್ದು ಪ್ರಭಾವದ ನಡುವೆಯೂ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗಡೆ ಕನ್ನಡ ಕಲಿಸುವ ಮೂಲಕ ಕನ್ನಡ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಮತ್ತು ಭೀಮಣ್ಣ ಖಂಡ್ರೆಯವರ ಪ್ರಯತ್ನ ಫಲವಾಗಿಯೇ ಹೈ–ಕ ಭಾಗದಲ್ಲಿ ಕರ್ನಾಟಕ ಉಳಿಯುವಂತೆ ಆಯಿತು ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಮೇಶ ಚಿದ್ರಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾಗಿ, ಕನ್ನಡಿಗರೆಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸಬೇಕು ಎಂದು ಕಿವಿಮಾತು ಹೇಳಿದರು. ಪ್ರೊ. ಶಂಭುಲಿಂಗ ಕಾಮಣ್ಣಾ, ಕಸಾಪ ತಾಲ್ಲೂಕು ಅಧ್ಯಕ್ಷ ವಸಂತ ಹುಣಸನಾಳೆ ಮಾತನಾಡಿದರು.
ಸನ್ಮಾನ: ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಬಸವರಾಜ ಮಠಪತಿ, ಬಿಕೆಐಟಿ ಕಾಲೇಜಿನ ಬಸವರಾಜ ಕಾವಡಿ ಅವರನ್ನು ಗೌರವಿಸಲಾಯಿತು.
ಚನ್ನವೀರ ಚಕ್ರಸಾಲಿ, ಸುರೇಶ ಲೋಖಂಡೆ, ಕಪಿಲ್ ಕಲ್ಯಾಣೆ, ಸಂಗಮೇಶ ವಾಲೆ, ಮಾರುತಿ ಸಗರ, ರಾಜಶ್ರೀ, ಉಷಾ ಜಗತಾಪ, ಅರುಣಾ ಬಿರಾದರ, ಸುನೀತಾ ಪಾಟೀಲ, ಷರೀಫ್ ಫೈಜೋನ್ನಬಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.