ADVERTISEMENT

ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

ಚಾಮರಾಜನಗರ: ರಸ್ತೆಯಲ್ಲಿ ನಿಂತ ನೀರು, ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:57 IST
Last Updated 17 ಮಾರ್ಚ್ 2018, 6:57 IST
ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಜಲಾವೃತವಾಗಿರುವುದು.
ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಜಲಾವೃತವಾಗಿರುವುದು.   

ಚಾಮರಾಜನಗರ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ 3.30ರ ಸುಮಾ ರಿಗೆ ಸಾಧಾರಣ ಮಳೆ ಸುರಿಯಿತು. ಸಣ್ಣನೆ ಗಾಳಿಯೊಂದಿಗೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿತು.

ಒಂದೇಸಮನೆ ಮಳೆ ಸುರಿದ ಕಾರಣ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರು.

ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಮತ್ತು ಕೆಸರು ತುಂಬಿ ಕೊಂಡಿತು. ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ನೀರು ನಿಂತಿದ್ದರಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

ADVERTISEMENT

ನಗರದಲ್ಲಿ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಪ್ರಮುಖ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ರಸ್ತೆಯಲ್ಲಿ 2ರಿಂದ  3 ಅಡಿಗಳಷ್ಟು ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಡಿದರು.

ಉಡಿಗಾಲ, ಪಣ್ಯದಹುಂಡಿ, ಬೇಡರಪುರ, ಸುವರ್ಣಾವತಿ, ಮಂಗಲ, ಹರದನಹಳ್ಳಿ, ಹೆಬ್ಬಸೂರು, ಚಂದಕ ವಾಡಿ, ನಾಗವಳ್ಳಿ, ಹೊಂಗನೂರು, ಮಾದಾಪುರ ಸೇರಿದಂತೆ ವಿವಿಧೆಡೆ ಮಳೆ ಸುರಿಯಿತು.

ಯಳಂದೂರಿನಲ್ಲೂ ಉತ್ತಮ ಮಳೆ
ಯಳಂದೂರು:
ತಾಲ್ಲೂಕಿನಲ್ಲಿ ಶುಕ್ರವಾರ ವರ್ಷದ ಮೊದಲ ಮಳೆ ಸುರಿಯಿತು. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತವರಣ ಇದ್ದ ಕಾರಣ ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಸಂತಸ ಅರಳಿತು.

ಸಂಜೆ 4 ಗಂಟೆಗೆ ತುಂತುರು ಮಳೆ ಆರಂಭವಾಯಿತು. ಬಳಿಕ ಜೋರಾಗಿ ಸುರಿಯಿತು. ಮಕ್ಕಳು ಮಳೆಯಲ್ಲಿ ನೆನೆದು ಸಂತೋಷಪಟ್ಟರೆ, ರೈತರು ಕೃಷಿ ಕಾರ್ಯದಲ್ಲಿ ತೊಡಗುವ ಚಿಂತನೆಯಲ್ಲಿದ್ದರು.

ಬಿಳಿಗಿರಿಬೆಟ್ಟದಲ್ಲಿ ಗುರುವಾರವಾರ ಹಾಗೂ ಶುಕ್ರವಾರ ಮಳೆ ಸುರಿದಿದ್ದು, ಕಾಳ್ಗಿಚ್ಚಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.

ಸತ್ತೇಗಾಲದಲ್ಲಿ ಬಡಾವಣೆ ಜಲಾವೃತ
ಕೊಳ್ಳೇಗಾಲ:
ತಾಲ್ಲೂಕಿನ ಸತ್ತೇಗಾಲದ ಸುತ್ತಮುತ್ತ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಹ್ಯಾಂಡ್‌ ಪೋಸ್ಟ್‌ನಲ್ಲಿರುವ ಬಡಾವಣೆಗಳಿಗೆಲ್ಲ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ.

ಧಾರಾಕಾರವಾಗಿ ಸುರಿದ ಮಳೆಯಿಂದ ಬಡಾವಣೆಯಲ್ಲಿರುವ ಮನೆಗಳಿಗೆ ನೀರುನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ರಸ್ತೆ ತುಂಬೆಲ್ಲಾ ನೀರು ನದಿಯಂತೆ ಹರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.