ADVERTISEMENT

ನೆಮ್ಮದಿಗಾಗಿ ಹುಡುಕಾಟ ಆರಂಭ

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:13 IST
Last Updated 15 ಮೇ 2017, 5:13 IST
ಗೊಂದಲಿಗರ ಮೇಳದ ಕಥನಕಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ 2017ರ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು
ಗೊಂದಲಿಗರ ಮೇಳದ ಕಥನಕಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ 2017ರ ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು   

ಕೋಲಾರ: ‘ಜನಪದ ವಿನಯವನ್ನು ಕಲಿಸುತ್ತದೆ. ಅಕ್ಷರ ಬಾರದವರು ಒಂದೂವರೆ ಗಂಟೆ ಹಾಡುತ್ತಾರೆ. ಅಂತಹವರ ಕುರಿತಾಗಿ ದಿನಪೂರಾ ಚರ್ಚೆ ಮಾಡಬಹುದಾದ ಸಂಗತಿಗಳಿವೆ’ ಎಂದು ಜನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ತಿಳಿಸಿದರು.

ನಗರದಲ್ಲಿ ಡಾ.ಎಲ್. ಬಸವರಾಜು ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ  ಡಾ.ಎಲ್. ಬಸವರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ನಾವು ಪರಸ್ಪರ ಪ್ರೀತಿ, ನಂಬಿಕೆಗಳನ್ನು ಕಳೆದುಕೊಂಡಿದ್ದೇವೆ.  ಕೈಯಲ್ಲಿ ಹಣವನ್ನು ಹಿಡಿದು ನೆಮ್ಮದಿಗಾಗಿ ಹುಡುಕಾಟ ಆರಂಭಿಸಿದ್ದೇವೆ. ಆದರೆ, ನಮ್ಮ ಪೂರ್ವಿಕರು ನೆಮ್ಮದಿಯನ್ನು ಕಲೆಗಳ ಮೂಲಕ ಬೇಕಾದಷ್ಟು ಇಟ್ಟುಕೊಂಡಿದ್ದರು’ ಎಂದು ಹೇಳಿದರು.

ADVERTISEMENT

‘ಆಧುನಿಕ ಶಿಕ್ಷಣದಿಂದಾಗಿ ಮೂಲ ಪರಂಪರೆಯನ್ನು ಮರೆಯುತ್ತಿದ್ದೇವೆ.  ಬೇರುಗಳನ್ನು ಕತ್ತರಿಸಿದ ಒಣ ಬದುಕಿನಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಶಸ್ತಿಗಳಿಂದ ಸಾಧಕನ ಸಾಧನೆ ಅಳೆಯಲು ಸಾಧ್ಯವಿಲ್ಲ. ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಜೊತೆಗೆ ಅವರ ಪ್ರತಿಭೆಗೆ ವೇದಿಕೆ ರೂಪಿಸುವ ಕೆಲಸ ಆಗಬೇಕು ಎಂದು  ಆಕಾಶ ವಾಣಿಯ ಕಾರ್ಯಕ್ರಮ ನಿರ್ವಾಹಕ ಅನಿಲ್ ದೇಸಾಯಿ ಅಭಿಪ್ರಾಯಪಟ್ಟರು.

‘ಗೊಂದಲಿಗರ ಮೇಳ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ವೆಂಕಪ್ಪ  ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು, ಅವರ ಕಲೆಯನ್ನು ಬಾಗಲಕೋಟೆಯಿಂದ ಕೋಲಾರದವರೆಗೂ ಗುರುತಿಸಿ ದಂತಾಗಿದೆ’ ಎಂದರು.

ಡಾ.ಎಲ್. ಬಸವರಾಜು ಪ್ರಶಸ್ತಿಯನ್ನು  ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಿನಾರಾಯಣ್, ಕಾರ್ಯದರ್ಶಿ ಪುರುಷೋತ್ತಮ್, ಸಾಹಿತಿ ಚಂದ್ರಶೇಖರ ನಂಗಲಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.